ಸ್ಮಾರಕವಾಗಲಿದೆ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮನೆ

ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಪುಟ್ಟಣ್ಣ ಕಣಗಾಲ್ ಒಬ್ಬರು. ಸಿನಿಮಾ ನಿರ್ದೇಶಕನಾಗಬೇಕು ಎಂದುಕೊಳ್ಳುವ ಪ್ರತಿಯೊಬ್ಬರಿಗೂ ಮೊದಲ ಗುರು ಪುಟ್ಟಣ್ಣ ಕಣಗಾಲ್. ಕನ್ನಡದ ಜೊತೆಗೆ ತೆಲುಗು, ತಮಿಳಿ, ಹಿಂದಿ ಭಾಷೆಯಲ್ಲೂ ಸಿನಿಮಾಗಳನ್ನು ನಿರ್ದೇಶಿಸಿರುವ ಪುಟ್ಟಣ್ಣ ಕಣಗಾಲ್ ಸಿನಿಮಾ ಮತ್ತು ಚಿತ್ರರಂಗಕ್ಕೆ ನೀಡಿರುರ ಸೇವೆ ಮರೆಯುವಂತಿಲ್ಲ.
ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ವಿಷ್ಣುವರ್ಧನ್, ಅಂಬರೀಶ್, ಕಲ್ಪನಾ, ಶ್ರೀನಾಥ್ ಸೇರಿದಂತೆ ಅನೇಕ ಗಣ್ಯರು ತಾರೆಯರಾಗಿ ಹೊರಹೊಮ್ಮಿದ್ದಾರೆ. ಇಂತಹ ದಿಗ್ಗಜರ ನೆನಪನ್ನು ಉಳಿಸುವಂತ ಕೆಲಸವನ್ನ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಕೈಗೊಂಡಿದ್ದಾರೆ. ಮೈಸೂರಿನ ಪಿರಿಯಾಪಟ್ಟಣದಲ್ಲಿರುವ ಪುಟ್ಟಣ್ಣ ಅವರ ಪೂರ್ವಿಕರ ಮನೆಯನ್ನು ಸ್ಮಾರಕವನ್ನಾಗಿ ಮಾಡಲು ಸರ್ಕಾರ ಒಪ್ಪಿದ್ದು, ಈ ಬಗ್ಗೆ ಸ್ವತಃ ಸಿ ಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ನಿನ್ನೆ (ಮಾರ್ಚ್ 3)ರಂದು ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಈ ವಿಷಯವನ್ನು ತಿಳಿಸಿದ್ದಾರೆ. ಅತೀ ಶೀಘ್ರದಲ್ಲಿಯೇ ಪುಟ್ಟಣ್ಣ ಕಣಗಾಲ್ ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಪುಟ್ಟಣ ಕಣಗಾಲ್ ನಿಧನದ ಬಳಿಕ ಪುಟ್ಟಣ್ಣ ಕಣಗಾಲ್ ಹುಟ್ಟಿಬೆಳೆದ ಮನೆಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಮೈಸೂರಿನ ಪಿರಿಯಾಪಟ್ಟಣದಲ್ಲಿರುವ ಈ ಮನೆ ಈಗ ಹಾಳಾಗಿದ್ದು, ತೀರಾ ಹಳೆಯ ಮನೆಯಾಗಿದ್ದರಿಂದ ವಾಸಿಸಲು ಯೋಗ್ಯವಾಗಿಲ್ಲ. ಹೀಗಾಗಿ ಈ ಮನೆಯನ್ನು ಪುಟ್ಟಣ್ಣ ಕಣಗಾಲ್ ಅವರ ನೆನಪಿಗಾಗಿ ಸ್ಮಾರಕ ಮಾಡುವಂತೆ ಹಲವು ದಿನಗಳಿಂದ ಕೂಗು ಕೇಳಿಬರುತ್ತಿತ್ತು. ಕೊನೆಗೂ ಕೂಗಿಗೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದು, ಸ್ಮಾರಕ ಮಾಡಲು ನಿರ್ಧರಿಸಿದ್ದಾರೆ.
