ಉತ್ತರಕನ್ನಡದಲ್ಲಿ ಅಬ್ಬರಿಸಿದ ಸಮುದ್ರ; ಯುವಕ ನೀರುಪಾಲು

ಕಾರವಾರ : ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಇದೇ ತಿಂಗಳ 15ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಸಮುದ್ರದ ಭೋರ್ಗರೆತ ಹೆಚ್ಚಾಗಿದ್ದು, ಘಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಅಲೆಗಳು ಏಳತೊಡಗಿದೆ.
ಇದರಿಂದಾಗಿ ಸಮುದ್ರ ಕೊರೆತ ಪ್ರಾರಂಭವಾಗಿದ್ದು, ಕಾರವಾರ ಕಡಲತೀರ ಭಾಗದಲ್ಲಿ ಮರಗಳು, ತಡೆಗೋಡೆ ಸಮುದ್ರದಲ್ಲಿ ಕೊಚ್ಚಿಹೋಗಿವೆ. ಇನ್ನು ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸಾಂಪ್ರದಾಯಿಕ ಮೀನುಗಾರಿಗೆ ನಿರ್ಬಂಧ ವಿಧಿಸಲಾಗಿದೆ. ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಸದ್ಯ ಮಳೆಗಿಂತ ಸಮುದ್ರದ ಆರ್ಭಟ ಹೆಚ್ಚಿದ್ದು,ಇದರಿಂದಾಗಿ ಕಡಲ ಕೊರೆತ ಸಹ ಕರಾವಳಿ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಗಿದೆ.
ಕೈಕಾಲು ತೊಳೆಯಲು ಹೊಳೆಯಲ್ಲಿ ಇಳಿದ ಯುವಕ ನೀರುಪಾಲು
ಹೊಳೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದ ಯುವಕ ನೀರು ಪಾಲಾಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯ ಹೊಳೆಯಲ್ಲಿ ನಡೆದಿದೆ.ಶ್ರೀಧರ ದೇವಾಡಿಗ (40) ನೀರು ಪಾಲಾದ ವ್ಯಕ್ತಿಯಾಗಿದ್ದಾನೆ.ಇಂದು ಸಾಯಂಕಾಲ ಗದ್ದೆ ಕೆಲಸ ಮಾಡಿ ಕೈಕಾಲು ತೊಳೆಯಲು ಪಕ್ಕದಲ್ಲೇ ಇದ್ದ ಹೊಳೆಗೆ ಇಳಿದಿದ್ದಾನೆ.
ಈ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದು ಕೊಚ್ಚಿಹೋಗಿದ್ದಾನೆ. ಸದ್ಯ ಆತನ ಶವಕ್ಕಾಗಿ ಸ್ಥಳೀಯರು ಮತ್ತು ಪೊಲೀಸರಿಂದ ಶೋಧ ಕಾರ್ಯ ನಡೆದಿದೆ. ಈವರೆಗೂ ಆತನ ಶವ ಪತ್ತೆಯಾಗಿಲ್ಲ. ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




