ವಿದ್ಯಾರ್ಥಿನಿಯರಿಗೆ ಕಿರುಕುಳ: ಪ್ರಭಾರ ಪ್ರಾಂಶುಪಾಲರ ವರ್ಗಾವಣೆ

ರಾಮನಗರ: ಮಾಗಡಿ ತಾಲೂಕಿನ ಹುಲಿಕಟ್ಟೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ವಿದ್ಯಾರ್ಥಿಗಳ ಮೇಲೆ ಕಾಫಿ ರೈಟಿಂಗ್ ಮಾಡಿಲ್ಲ ಎಂದು ಮನಬಂದಂತೆ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೃಷ್ಣಮೂರ್ತಿ ಅವರನ್ನು ವರ್ಗಾವಣೆ ಮಾಡಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾಗಿ ಹಸೀನ್ ತಾಜ್ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಪಕ್ಕದಲ್ಲೆ ಇದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೃಷ್ಣಮೂರ್ತಿ ಅವರನ್ನು ಕಿತ್ತೂರು ರಾಣಿ ವಸತಿ ಶಾಲೆಗೆ ಸೆಪ್ಟೆಂಬರ್ ತಿಂಗಳಲ್ಲಿ ನೇಮಕ ಮಾಡಲಾಗಿತ್ತು. ಪ್ರಾಂಶುಪಾಲ ವಿದ್ಯಾರ್ಥಿಗಳ ಜೊತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು ರಾತ್ರಿ ವೇಳೆ ವಿದ್ಯಾರ್ಥಿನಿಯರು ಕಾಫಿ ರೈಟಿಂಗ್ ಮಾಡಿಲ್ಲ ಎಂದು ವಿದ್ಯಾರ್ಥಿಗಳಿಗೆ ಹೊಡೆದು ವಿದ್ಯಾರ್ಥಿನಿಯರಲ್ಲಿ ಭಯ ಬರುವ ರೀತಿ ಮಾಡಿದ್ದರು.
ಇದನ್ನೂ ಓದಿ : ವಸತಿ ಶಾಲೆಯ ಮುಖ್ಯಶಿಕ್ಷಕರು ಸರಿಯಿಲ್ಲ- ಕೂಡಲೇ ನಮಗೆ ಬೇರೆ ಶಿಕ್ಷಕರನ್ನ ನೀಡಿ: ವಿದ್ಯಾರ್ಥಿಗಳ ಅಳಲು
ಇದರಿಂದ ಒಂದು ವಿದ್ಯಾರ್ಥಿನಿ ಶಾಲೆಯಿಂದಲೇ ವರ್ಗಾವಣೆಯ ನಿರ್ಧಾರಕ್ಕೂ ಬಂದಿದ್ದಾಳೆ ಎಂದು ಹಲವು ಪೋಷಕರು ಕೃಷ್ಣಮೂರ್ತಿ ವಿರುದ್ದ ದೂರು ನೀಡಿದ್ದಾರೆ.
ಶಿಸ್ತು ಕ್ರಮ: ಪ್ರಭಾರ ಪ್ರಾಂಶುಪಾಲರಾಗಿ ನೇಮಕವಾಗಿದ್ದ ಕೃಷ್ಣಮೂರ್ತಿ ವಿದ್ಯಾರ್ಥಿಗಳಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ದೂರಿನ ಹಿನ್ನೆಲೆಯಲ್ಲಿ ಕ್ರೈಸ್ನ ಜಿಲ್ಲಾ ಮಟ್ಟದ ಸಮನ್ವಯ ಅಧಿಕಾರಿ ಮಹೇಶ್ ಶನಿವಾರ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದು ಈ ವರದಿಯನ್ನು ಸಿಇಒ ರವರಿಗೆ ಕಳುಹಿಸಿದ್ದರು. ಮತ್ತು ವಿಚಾರಣೆ ವೇಳೆ ಕೃಷ್ಣಮೂರ್ತಿ ಅವರು ಮಕ್ಕಳಿಗೆ ಹೊಡೆದಿರುವ ಬಗ್ಗೆ ಒಪ್ಪಿಕೊಂಡಿದ್ದು, ಇವರ ಮೇಲೆ ಶಿಸ್ತಿನ ಕ್ರಮ ಜರುಗಿಸುವಂತೆ ವರದಿ ಸಲ್ಲಿಸಲಾಗುತ್ತದೆಂದು ವರದಿಯಲ್ಲಿ ತಿಳಿಸಿದ್ದರು.
ಪ್ರಭಾರ ಪ್ರಾಂಶುಪಾಲರಾಗಿ ನೇಮಕ:
ಕೃಷ್ಣಮೂರ್ತಿ ವಿರುದ್ದ ಸಾಕಷ್ಟು ಆರೋಪ ಬಂದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಕೂಡಲೇ ಜಾರಿಯಾಗುವಂತೆ ಹುಲಿಕಟ್ಟೆ ಚೆನ್ನಮ್ಮ ವಸತಿ ಶಾಲೆಗೆ ಹನುಮಾನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಪವಿತ್ರ ಅವರನ್ನು ಪ್ರಭಾರಿ ಪ್ರಾಂಶುಪಾಲರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿ ಕೃಷ್ಣಮೂರ್ತಿ ಅವರನ್ನು ಪ್ರಭಾರಿ ಹುದ್ದೆಯಿಂದ ಇಳಿಸಲಾಗಿದೆ.
ಶಾಸಕ ಎ.ಮಂಜುನಾಥ್ ಅವರು ಕೂಡ ಕೃಷ್ಣಮೂರ್ತಿ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ನಿರ್ದೇಶಕರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ




