ಈ ಗ್ರಾಮದಲ್ಲಿ ನಾಗರಹಾವು ಮುಟ್ಟಿದರೂ ಕಚ್ಚಲ್ಲ..ಕಚ್ಚಿದರೂ ಏನು ಆಗಲ್ಲ..!

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದ ನಾಗೇನಹಳ್ಳಿ ಗ್ರಾಮದಲ್ಲಿ ಎಲ್ಲಿ ನೋಡಿದರೂ ನಾಗರಹಾವುಗಳು ಕಾಣುತ್ತವೆ. ಇಲ್ಲಿನ ಜನರಿಗೆ ಹಾವುಗಳನ್ನು ಕಂಡರೇ ಭಯ ಇಲ್ಲ. ಹೆದರಿ ಓಡೋಗೋದಿಲ್ಲ. ಹಾವು ಕಂಡರೆ ದೈವಭಕ್ತಿ. ಅಷ್ಟೇ ಅಲ್ಲ, ನಿರ್ಭೀತಿಯಿಂದ ಹಾವುಗಳನ್ನು ಮುಟ್ಟುತ್ತಾರೆ, ಜೊತೆಗೆ ಆಟ ಆಡಿಸುತ್ತಾರೆ. ಈ ಗ್ರಾಮದೊಳಗೆ ನಾಗರಹಾವು ಕಚ್ಚಿದರೂ ಸಾಯುವುದಿಲ್ಲ.
ಇದು ನಾಗೇನಹಳ್ಳಿಯ ಶ್ರೀ ಕ್ಷೇತ್ರದಲ್ಲಿ ನೆಲೆಸಿರುವ ನಾಗಲಿಂಗೇಶ್ವರ ಸ್ವಾಮಿ ಪವಾಡ ಅನ್ನೋದು ಜನರ ನಂಬಿಕೆ. ಮನೆಯೊಳಗೆ ಸೀದಾ ಹಾವು ಬಂದರೂ ಜನರು ಕೋಲು ತೆಗೆದುಕೊಂಡು ಓಡಿಸಲು ಹೋಗಲ್ಲ. ಹೊಡೆಯುವುದೂ ಇಲ್ಲ. ಬದಲಾಗಿ ಪೂಜೆ ಪುನಸ್ಕಾರ ನೆರವೇರಿಸುತ್ತಾರೆ. ದೊಡ್ಡವರು, ಮಕ್ಕಳು ಹಾವನ್ನು ಯಾವ ಹೆದರಿಕೆ ಇಲ್ಲದೇ ಕೈಯಲ್ಲಿ ಹಿಡಿದುಕೊಳ್ಳುತ್ತಾರೆ. ಇಲ್ಲಿ ನಾಗರಹಾವು ನೆಲೆಸಲು, ಕಚ್ಚಿದರೆ ವಿಷ ಏರದೇ ಇರುವುದಕ್ಕೆ ಶತಮಾನಗಳ ಇತಿಹಾಸ ಇದೆ.
400 ವರ್ಷಗಳ ಹಿಂದೆ ಋಷಿಮುನಿಯೊಬ್ಬರು ಈ ಗ್ರಾಮದಲ್ಲಿ ಬಸಲೆ ಮರ ಕಟ್ಟೆಯಲ್ಲಿ ತಂಗುತ್ತಿದ್ದರಂತೆ. ನಿತ್ಯವೂ ನಾಗದೇವನ ಪೂಜೆ ಮಾಡಿದ ಬಳಿಕ ಭಿಕ್ಷಾಟನೆಗೆ ತೆರಳುತ್ತಿದ್ದರಂತೆ. ಒಂದು ದಿನ ಭಿಕ್ಷೆಗೆ ಹೋಗಿದ್ದಾಗ ಒಂದು ಮಗು ಋಷಿಗೆ ಸಿಕ್ಕಿತ್ತಂತೆ. ದೇವಸ್ಥಾನದ ಬಳಿ ಇಟ್ಟು ಎಂದಿನಂತೆ ಭಿಕ್ಷಾಟನೆಗೆ ಹೋಗಿ ಬರುವಷ್ಟರಲ್ಲಿ ನಾಗರಹಾವು ಕಚ್ಚಿದರಿಂದಾಗಿ ಮಗು ಸಾವನ್ನಪ್ಪಿತ್ತಂತೆ. ಬಳಿಕ ಉಗ್ರರಾದ ಋಷಿಮುನಿ ಮತ್ತೆ ಯಾರಿಗೂ ಇಂಥ ನೋವು ಬರಬಾರದು ಎಂಬ ಕಾರಣಕ್ಕೆ ನಾಗರಹಾವು ಈ ಗ್ರಾಮದಲ್ಲಿ ಯಾರಿಗೂ ಕಚ್ಚಬಾರದು, ಕಚ್ಚಿದರೂ ವಿಷ ಏರಬಾರದು ಎಂಬ ಶಾಪ ಕೊಟ್ಟರಂತೆ.
ಅಂದಿನಿಂದ ಇಂದಿನವರೆಗೂ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಋಷಿಮುನಿ ಸಾವನ್ನಪ್ಪಿದ ಬಳಿಕವೂ ಅವರು ಪೂಜೆ ಮಾಡುತ್ತಿದ್ದ ಸ್ಥಳವನ್ನು ಈಗಲೂ ಪೂಜಿಸುತ್ತಾರೆ ಜನರು. ಹಾವು ಬಹಳ ಜನರಿಗೆ ಕಚ್ಚಿದರೂ ಸತ್ತಿಲ್ಲ. ಈ ಊರಲ್ಲಿ ಹಾವು ಕಡಿದರೆ ಆಸ್ಪತ್ರೆಗೆ ಹೋಗೋದಿಲ್ಲ. ಆಂಜನೇಯನ ಗುಡಿಗೆ ಹೋಗಿ ತೀರ್ಥ ಹಾಕಿದರೆ ವಾಸಿಯಾಗುತ್ತೆ ಎಂಬ ನಂಬಿಕೆ ಇದೆ. ಯಾವ ಟ್ರೀಟ್ ಮೆಂಟ್ ಇಲ್ಲ. ಬೇಕಾದಷ್ಟು ಜನರಿಗೆ ಹಾವು ಕಚ್ಚಿದರೂ ದೇವಸ್ಥಾನದಲ್ಲಿ ಇದ್ದು ಮನೆಗೆ ಹೋಗುತ್ತಾರೆ. ರಕ್ತ ಸೋರುವ ಹಾಗೆ ಕಚ್ಚಿದರೂ ಯಾರೂ ಸತ್ತು ಹೋಗಿಲ್ಲ ಎನ್ನುವ ಈ ಊರಿನ ಜನರು, ಸತ್ತು ಹೋದ ಸನ್ಯಾಸಿಗೆ ಈಗಲೂ ಪೂಜೆ ನೆರವೇರಿಸುತ್ತಾರೆ.
ಸರ್ಪ ದೋಷ ಇದ್ದರೆ, ಸರ್ಪ ಹುಣ್ಣು ಆದರೆ ಈ ಗ್ರಾಮಕ್ಕೆ ಬಂದು ನಾಗಲಿಂಗೇಶ್ವರ ಸ್ವಾಮಿಗೆ ಪೂಜೆ ಮಾಡಿಸಿದರೆ ಸಾಕು ದೋಷ ನಿವಾರಣೆಯಾಗುತ್ತದೆ. ಏನೇ ಕಷ್ಟ ಬಂದರೂ ನಾಗಲಿಂಗೇಶ್ವರ ಸ್ವಾಮಿ ಈಡೇರಿಸುತ್ತಾನೆ. ಇನ್ನು ತಪ್ಪು ಮಾಡಿದ್ದನ್ನು ಒಪ್ಪಿಕೊಂಡರೇ ಸ್ವಾಮಿ ಕ್ಷಮಿಸಿಬಿಡುತ್ತಾನೆ ಎನ್ನುವ ನಂಬಿಕೆಯೂ ಇದೆ.
-ರಮೇಶ್, 24×7 ಲೈವ್ ಕನ್ನಡ



