ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆಯದೆ 1 ರಿಂದ 5 ನೇ ತರಗತಿಗಳನ್ನು ಪ್ರಾರಂಭಿಸುವುದಿಲ್ಲ: ಸಚಿವ ನಾಗೇಶ್

ಕಾರವಾರ : ಒಂದನೇ ತರಗತಿಯಿಂದ ಭೌತಿಕ ಬೋಧನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಕೋವಿಡ್ ಸಂಬಂಧ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆಯದೇ ತರಗತಿಗಳನ್ನು ಪ್ರಾರಂಭಿಸುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಇಂದು ಸಚಿವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿ ಶ್ರೀಕ್ಷೇತ್ರ ವೀರಾಂಜನೇಯ ದೇವಾಲಯಕ್ಕೆ ಭೇಟಿ ನೀಡಿದ್ದರು.ಈ ವೇಳೆ ಮಾಧ್ಯಮಗಳೊಂದಿಗೆ ಸಚಿವರು ಮಾತನಾಡಿದರು. ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಡೆದು 6 ನೇ ತರಗತಿಗಳನ್ನು ಆರಂಭ ಮಾಡಿ ಯಶಸ್ವಿಯಾಗಿದ್ದೇವೆ. ರಾಜ್ಯದಲ್ಲಿ ಪಠ್ಯ ಪುಸ್ತಕ ಈಗಾಗಲೇ ಶೇ.82ರಷ್ಟು ಪೂರೈಕೆಯಾಗಿದೆ ಎಂದರು.
ಪಠ್ಯ ಪುಸ್ತಕ ಸಮಿತಿ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕಳೆದ ಸಲ ಈ ವಿಷಯ ಯಾಕೆ ಟೀಕೆಗೊಳಗಾಗಿಲ್ಲ. ಯಾವುದೇ ಪಠ್ಯ ಪುಸ್ತಕ ಕ್ರಮ 20 ರಿಂದ 15 ವರ್ಷ ಇರುತ್ತದೆ. ಕಾಲಕಾಲಕ್ಕೆ ಅವಶ್ಯಕತೆಗೆ ಅನುಗುಣವಾಗಿ ಪಠ್ಯಕ್ರಮ ರಚನೆಯಾಗುತ್ತದೆ.
2015 ರಲ್ಲಿ ಆದ ಪಠ್ಯಕ್ರಮ 2017 ರಲ್ಲಿ ಯಾಕೆ ಬದಲಾವಣೆ ಮಾಡಲಾಯಿತು ಎಂದು ಪ್ರಶ್ನಿಸಿದ ಅವರು ಪ್ರತಿ ಬಾರಿ ಪಠ್ಯ ಕ್ರಮದಲ್ಲಿರುವ ಅಲ್ಪಸ್ವಲ್ಪ ತಪ್ಪುಗಳನ್ನು ಸರಿಪಡಿಸಲು ಸಮಿತಿ ನಿರ್ಮಾಣವಾಗಿರುತ್ತದೆ ಎಂದರು.
ಕಾಂಗ್ರೆಸ್ನವರಿಗೆ ಬಿಜೆಪಿಯವರನ್ನು ಟೀಕೆ ಮಾಡುವ ಕೆಟ್ಟ ಅಭ್ಯಾಸ ಇದೆ. ಕಾಂಗ್ರೆಸ್ ರೂಲಿಂಗ್ ಮಾಡಿ ರೂಢಿಯಾಗಿದೆ ಹೊರತು ಪ್ರತಿಪಕ್ಷ ಸ್ಥಾನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿಲ್ಲ. ಎಲ್ಲಾ ಕಡೆ ಜಾತಿ,ಧರ್ಮ ಹುಡುಕೋದೆ ಅವರ ಹಣೆಬರಹ. ಕಾಂಗ್ರೆಸ್ನವರು ಮತಕ್ಕಾಗಿ ಧರ್ಮವನ್ನು ಉಪಯೋಗಿಸುತ್ತಾರೆ ಎಂದು ಟೀಕಿಸಿದರು. ಮಕ್ಕಳಿಗೆ ಕೊಡುವ ಪಠ್ಯ ಪುಸ್ತಕ ಸರಿಯಾಗಿರಬೇಕು. ಕಸ್ತೂರಿ ರಂಗನ್ ನೇತೃತ್ವದಲ್ಲಿ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಿದ್ದರಾಮಯ್ಯ ಟೀಕೆ ಮಾಡುತ್ತಿರುವುದು ದುರದೃಷ್ಟಕರ ಎಂದು ಸಚಿವ ಬಿ.ಸಿ.ನಾಗೇಶ್ ಟೀಕಿಸಿದರು.
