
ಬೆಂಗಳೂರು: ವಿಧಾನಮಂಡಳ ಅಧಿವೇಶನಕ್ಕೆ ಲೋಕಸಭೆಯ ಸ್ಪೀಕರ್ ಕರೆಸುವ ರಾಜ್ಯ ಸರ್ಕಾರದ ತೀರ್ಮಾನ ಸಂಸದೀಯ ಪ್ರಜಾಸತ್ತೆಯ ಮೌಲ್ಯಗಳಿಗೆ ವಿರುದ್ಧವಾದದ್ದು. ಈ ರೀತಿಯ ಉದಾಹರಣೆ ಕರ್ನಾಟಕದ ಇತಿಹಾಸದಲ್ಲಿ ನಡೆದಿರಲಿಲ್ಲ. ಈ ಮೂಲಕ ಕೆಟ್ಟ ಪರಂಪರೆಯನ್ನು ಆರಂಭಿಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಮಂಡಳದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಇರುವುದು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಾತ್ರ. ಲೋಕಸಭೆ ಸ್ಪೀಕರ್ ಕರೆಸುವ ಮೂಲಕ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಇದು ಪ್ರಜಾತಂತ್ರ ವ್ಯವಸ್ಥೆಯ ಅಣಕವಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಎರಡೂ ಕೂಡ ಜನಪ್ರತಿನಿಧಿಗಳ ಸಭೆ. ಒಂದು ಹೆಚ್ಚು, ಒಂದು ಕಡಿಮೆಯಿಲ್ಲ. ಎರಡೂ ಕೂಡ ಭಾರತ ಸಂವಿಧಾನದ ಪ್ರಕಾರವೇ ನಡೆಯುತ್ತವೆ. ವಿಧಾನಮಂಡಳದಲ್ಲಿ ಲೋಕಸಭೆ ಸ್ಪೀಕರ್ ಕರೆಸುವ ಔಚಿತ್ಯವಾದರೂ ಏನು? ಈ ಸಂಪ್ರದಾಯ ಹುಟ್ಟುಹಾಕುವ ಅಗತ್ಯವಾದರೂ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಒಕ್ಕೂಟ ಸರ್ಕಾರ ಭಾರತ ಗಣರಾಜ್ಯದ ಒಕ್ಕೂಟ ತತ್ವಗಳನ್ನು ಒಂದೊಂದಾಗಿ ಮುರಿಯುತ್ತಾ ಬರುತ್ತಿದೆ. ಎಲ್ಲ ವಿಷಯದಲ್ಲೂ ಏಕತ್ವವನ್ನು ಹೇರುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತ ಬರುತ್ತಿದೆ. ಕರ್ನಾಟಕ ಸರ್ಕಾರವು ಈ ಖೆಡ್ಡಾಗೆ ಬಿದ್ದು ತನ್ನ ತನವನ್ನು ಕಳೆದುಕೊಳ್ಳಬಾರದಿತ್ತು. ಕರ್ನಾಟಕ ವಿಧಾನಸಭೆ, ವಿಧಾನಪರಿಷತ್ ಸಭಾಧ್ಯಕ್ಷರು ಕೂಡಲೇ ಜಂಟಿ ಅಧಿವೇಶನವನ್ನು ರದ್ದುಗೊಳಿಸಬೇಕು. ಲೋಕಸಭೆ ಸ್ಪೀಕರ್ ಜತೆ ಬೇರೆ ಸ್ಥಳದಲ್ಲಿ ಕಾರ್ಯಕ್ರಮ ನಡೆಸಿಕೊಳ್ಳಲಿ. ಕರ್ನಾಟಕ ವಿಧಾನಮಂಡಳದ ಪಾವಿತ್ರ್ಯತೆಯನ್ನು ಹಾಳು ಗೆಡಹುವುದು ಬೇಡ ಎಂದು ಸಲಹೆ ನೀಡಿದ್ದಾರೆ.



