ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ರ್ಯಾಲಿ ಬೆಳಗಾವಿಯಲ್ಲಿ ಆರಂಭ: ಕಾಶಪ್ಪನವರ ಸಾರಥ್ಯ

ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ರಾಜ್ಯಾದ್ಯಂತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಸಮಾವೇಶ ನಡೆಸುತ್ತಿದ್ದು. ಪಂಚಮಸಾಲಿಗರ ಪ್ರತಿಜ್ಞಾ ಪಂಚಾಯತ್ ಅಭಿಯಾನ ಬೆಳಗಾವಿಗೆ ಆಗಮಿಸಿದೆ.
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನದ ರ್ಯಾಲಿ ಆರಂಭವಾಯಿತು. ಈ ವೇಳೆ ರ್ಯಾಲಿಗೆ ಚಾಲನೆ ನೀಡಿದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಪಂಚಮಸಾಲಿ ಮುಖಂಡರಾದ ರೋಹಿಣಿ ಪಾಟೀಲ್, ಆರ್.ಕೆ.ಪಾಟೀಲ್, ರುದ್ರಣ್ಣ ಚಂದರಗಿ, ನಿಂಗಪ್ಪ ಪಿರೋಜಿ, ಧರೆಪ್ಪ ಠಕ್ಕನ್ನವರ, ರಾಜು ಮಗದುಮ್ಮ, ಸುರೇಶಗೌಡ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು, ವಾದ್ಯ ಮೇಳಗಳೊಂದಿಗೆ ಚನ್ನಮ್ಮಾಜಿ ವೃತ್ತದ ಮಾರ್ಗವಾಗಿ ಪ್ರತಿಜ್ಞಾ ಪಂಚಾಯತ್ ಸಮಾವೇಶ ನಡೆಯಲಿರುವ ಗಾಂಧಿ ಭವನದತ್ತ ಹೆಜ್ಜೆ ಹಾಕಿದರು.



