
ಕೋಲ್ಕತ್ತ: ʼಖೇಲಾಹೋಬ್ʼ ಘೋಷಣೆಯೊಂದಿಗೆ ಪಶ್ಚಿಮ ಬಂಗಾಳದಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿ ತಮ್ಮ ಪಕ್ಷ ಬಿಜೆಪಿಯನ್ನು ಸೋಲಿಸಿರುವಂತೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೇಶಾದ್ಯಂತ ಸೋಲು ಖಚಿತ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೋಲ್ಕತ್ತ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಫೂಲ್ಬಾಗ್ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅನಾವರಣಗೊಳಿಸಿದ ಪ್ರಚಾರದ ಕಾರ್ಯವೈಖರಿಯನ್ನು ನಾವು ಕಂಡಿದ್ದೇವೆ. ಮೊದಲು ಎಲ್ಲರಿಗೂ ಭಯ ಉಂಟಾಗಿತ್ತು. ಆದರೆ ರಾಜ್ಯದ ಜನತೆ ಅವರಿಗೆ ತಕ್ಕ ಪಾಠ ಕಲಿಸಿದರು. ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿದ ನಾವು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ. ನಮ್ಮ ಏಕೈಕ ಗುರಿ ಎಂದರೆ ಉದ್ಯಮಗಳನ್ನು ತರುವುದು ಮತ್ತು ಉದ್ಯೋಗ ಸೃಷ್ಟಿ ಎಂದು ಸ್ಪಷ್ಟಪಡಿಸಿದರು.
ಕೋಮುಧ್ವೇಷದ ರಾಜಕಾರಣವನ್ನು ಜನ ತಿರಸ್ಕರಿಸುತ್ತಿದ್ದಾರೆ. ಬಂಗಾಲ ಸರ್ವಜನರ ಸಾಮರಸ್ಯದ ತಾಣ. ಬಂಗಾಲ ಇಂದು ಏನು ಯೋಚಿಸುತ್ತದೆಯೋ ಅದನ್ನು ಭಾರತ ನಾಳೆ ಯೋಚಿಸುತ್ತದೆ. 2024ರ ಚುನಾವಣೆಯಲ್ಲಿ ಬಿಜೆಪಿ ಸೋಲುವುದನ್ನು ನಾನು ಎದುರು ನೋಡುತ್ತಿದ್ದೇನೆ. ನಾವು ಈಗಾಗಲೇ ಗೋವಾದಲ್ಲಿ ಹೊಸ ಘಟಕ ತೆರೆದಿದ್ದೇವೆ. ತ್ರಿಪುರಾದಲ್ಲೂ ವಿಸ್ತರಿಸಿದ್ದೇವೆ ಎಂದು ತಿಳಿಸಿದರು.



