ಕನ್ವರ್ ಯಾತ್ರೆ ಬೇಡ; ಯುಪಿ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ನಿರ್ದೇಶನ

ನವದೆಹಲಿ: ಈ ಬಾರಿ ಕನ್ವರ್ ಯಾತ್ರೆ ಬೇಡ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಈ ಕುರಿತ ನಿರ್ಧಾರವನ್ನು ಮರುಪರಿಶೀಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಸೋಮವಾರದವರೆಗೆ ಉತ್ತರಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಕಾಲಾವಕಾಶ ಕೊಟ್ಟಿದೆ.
ಕನ್ವರ್ ಯಾತ್ರೆಯನ್ನು ಸಾಂಕೇತಿಕವಾಗಿ ನಡೆಸಲಾಗುವುದು ಮತ್ತು ಸಲಿಕೆ ಪಡೆದ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸುಪ್ರಿಂ ಕೋರ್ಟ್ನ ಪೀಠಕ್ಕೆ ಉತ್ತರ ಪ್ರದೇಶ ಸರ್ಕಾರ ಅಫಿಡವಿಟ್ ಸಲ್ಲಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೋರ್ಟ್ ಈ ನಿರ್ದೇಶನ ನೀಡಿದೆ.
ಆರೋಗ್ಯ ಮತ್ತು ಬದುಕುವ ಹಕ್ಕು ದೊಡ್ಡದು. ಇದು ಎಲ್ಲ ನಾಗರಿಕರಿಗೂ ಅನ್ವಯಿಸುತ್ತದೆ. ಉತ್ತರ ಪ್ರದೇಶ ಸರ್ಕಾರ ಇಂಥ ಸಾಂಕ್ರಾಮಿಕ ಆತಂಕವಿರುವ ಹೊತ್ತಲ್ಲಿ ಯಾತ್ರೆ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ನ್ಯಾಯಪೀಠ ಹೇಳಿದೆ.
ಮತ್ತೊಂದು ಅವಕಾಶವನ್ನು ಕೊಡುತ್ತಿದ್ದೇವೆ. ಯಾತ್ರೆ ಕೈಗೊಳ್ಳಬೇಕೆಂಬ ನಿರ್ಧಾರ ಮರುಪರಿಶೀಲಿಸಿ. ಇಲ್ಲದಿದ್ದಲ್ಲಿ ನಾವು ಆದೇಶ ನೀಡಬೇಕಾಗುತ್ತದೆ ಎಂದು ಸುಪ್ರಿಂ ಕೋರ್ಟ್ ಹೇಳಿದೆ.
ಉತ್ತರ ಪ್ರದೇಶ ಸರ್ಕಾರ ಕನ್ವರ್ ಯಾತ್ರೆ ಕೈಗೊಳ್ಳುವ ನಿರ್ಧಾರ ತೆಗೆದುಕೊಂ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ವಿಚಾರವನ್ನು ವಿಚಾರಣೆಗೆ ಎತ್ತಿಕೊಂಡು, ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರಕ್ಕೆ ಈ ಸಮಬಂಧ ಉತ್ತರಿಸುವಂತೆ ಕೇಳಿತ್ತು.
ಇದಕ್ಕೆ ಉತ್ತರಿಸಿದ್ದ ಯುಪಿ ಸರ್ಕಾರ, ಸಾಂಕೇತಿಕವಾಗಿ ಆಚರಿಸುವುದಾಗಿಯೂ, ಲಸಿಕೆ ಪಡೆದವರಿಗೆ ಮಾತ್ರ ಅವಕಾಶ ನೀಡುವುದಾಗಿಯೂ ಹೇಳಿತ್ತು. ಕೇಂದ್ರ ಸರ್ಕಾರವೂ ಈ ಯಾತ್ರೆಗೆ ವಿರೋಧ ವ್ಯಕ್ತಪಡಿಸದೆ, ಧಾರ್ಮಿಕ ಭಾವನೆ ಬಗ್ಗೆ ಮಾತಾಡಿತ್ತು.
ಕಳೆದ ಬಾರಿಯೂ ಕೋವಿಡ್ ಮೊದಲ ಅಲೆ ಹಿನ್ನೆಲೆಯಲ್ಲಿ ಈ ಯಾತ್ರೆ ರದ್ದಾಗಿತ್ತು.
