
ಬೆಂಗಳೂರು: ಒಂದೆಡೆಗೆ ನನ್ನ ಪ್ರಾಣಸ್ನೇಹಿತ ಅಂಬರೀಷ್ ಎನ್ನುವ ಕುಮಾರಸ್ವಾಮಿ ಇನ್ನೊಂದೆಡೆ ಶಾಸಕ ರವೀಂದ್ರ ಶ್ರೀಕಂಠಯ್ಯ ಹಿಂದೆ ನಿಂತು, ಅಕ್ರಮ ಗಣಿಗಾರಿಕೆಯಲ್ಲಿ ಅಂಬರೀಷ್ ಪಾಲೂ ಇದೆ ಎಂದು ಹೇಳಿಸುತ್ತಾರೆ ಎಂದು ಸಂಸದೆ ಸುಮಲತಾ ಕಿಡಿ ಕಾರಿದ್ದಾರೆ.
ಅಂಬರೀಷ್ ಸ್ಮಾರಕ ತಾನು ಮಾಡಿಸಿದೆ ಎಂಬ ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯಿಸಿರುವ ಅವರು, ಅಂಬರೀಷ್ ಸ್ಮಾರಕ ಮಾಡಿಸುವುದಕ್ಕೆ ನೆರವಾಗಿರುವುದು ಮುಖ್ಯಮಂತ್ರಿ ಯಡಿಯೂರಪ್ಪನವರು. ಅಂಬರೀಷ್ ಸ್ಮಾರಕ ವಿಚಾರ ಬಂದಾಗ ನಾನ್ಯಾಕೆ ಮಾಡಿಸಲಿ ಎಂದು ಹೇಳಿ ನಟ ದೊಡ್ಡಣ್ಣ ಮುಖದ ಮೇಲೆ ಪೇಪರ್ ಎಸೆದಿದ್ದ ವ್ಯಕ್ತಿ ಇವತ್ತು ಏಕೆ ತಾನು ಸ್ಮಾರಕ ಮಾಡಿಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಸುಮಲತಾ ಕಿಡಿ ಕಾರಿದ್ದಾರೆ.
ಆಡಿಯೊ ವಿಡಿಯೋ ಏನೇ ಇದ್ದರೂ ಈಗಲೇ ಬಿಡುಗಡೆ ಮಾಡಿ. ನಾನು ಹೇಳುತ್ತಲೇ ಇದ್ದೇನೆ. ಇವರೇಕೆ ಎಲೆಕ್ಷನ್ವರೆಗೂ ಕಾಯಬೇಕು ಎಂದು ಸುಮಲತಾ ಸವಾಲು ಹಾಕಿದ್ದಾರೆ. ಕದ್ದುಮುಚ್ಚಿಡುವುದು, ಟ್ಯಾಪಿಂಗ್ ಮಾಡುವುದು ಇವೆಲ್ಲ ಅವರಿಗೆ ಅಔ್ಯಾಸ ಆಗಿಬಿಟ್ಟಿದೆ ಎಂದೂ ಸುಮಲತಾ ವ್ಯಂಗ್ಯವಾಡಿದ್ದಾರೆ.
ನಿರ್ಮಾಲಾನಂಧ ಶ್ರೀಗಳಂಥ ದೊಡ್ಡವರ ಫೋನ್ ಕೂಡ ಟ್ಯಾಪ್ ಮಾಡಿದ್ದವರು ಇವರು ಎಂದು ಸುಮಲತಾ ಹೇಳಿದ್ದಾರೆ.
ನಿಮಗೆ ಕೊಂಚವಾದರೂ ಸಂಸ್ಕೃತಿ, ನಾಚಿಕೆ ಇದ್ದರೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ನಿಮ್ಮ ರಾಜಕಾರಣಕ್ಕೆ ಅಂಬರೀಷ್ ಹೆಸರು ಬಳಸಬೇಡಿ ಎಂದು ಸುಮಲತಾ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ನಾನು ಮಾತಾಡಿದರೆ ನಿಮಗೇಕೇ ಸಿಟ್ಟು? ಅಕ್ರಮ ಗಣಿಗಾರಿಕೆಯಿಂದ ನೀವೇನು ಲಾಭ ಪಡೆಯುತ್ತಿದ್ದೀರಿ? ನೀವು ಲಾಭ ಪಡೆಯುತ್ತಿದ್ದೀರಿ ಎಂಬುದು ಸ್ಪಷ್ಟ ಎಂದೂ ಸುಮಲತಾ ಹೇಳಿದ್ದಾರೆ.



