ಅಪ್ಪನ ಜೊತೆ ಜಗಳವಾಡಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಚಿಕ್ಕಮಗಳೂರು: ಅಪ್ಪನ ಜೊತೆ ಜಗಳವಾಡಿ ನಾಲ್ಕನೇ ತರಗತಿ ಓದುತ್ತಿದ್ದ 9 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಮೃತನನ್ನ ಬಾಲಕ ಚೇತನ್ ಎಂದು ಗುರುತಿಸಲಾಗಿದೆ. ಮೃತ ಬಾಲಕನ ಪೋಷಕರಾದ ಗಣೇಶ್ ಹಾಗೂ ಶೋಭಾ ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಶೇಷಗಿರಿ ಗ್ರಾಮದವರು. ಕಳೆದ ನಾಲ್ಕೈದು ವರ್ಷಗಳ ಹಿಂದೆ ಆಲ್ದೂರಿಗೆ ಬಂದಿದ್ದ ಕುಟುಂಬ ಇಬ್ಬರು ಗಂಡು ಮಕ್ಕಳೊಂದಿಗೆ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಕಾಫಿತೋಟಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆಗಾಗ್ಗೆ ರಾಣಿಬೆನ್ನೂರಿಗೆ ಹೋಗಿ ಬರುತ್ತಿದ್ದರು. ಮೃತ ಬಾಲಕ ತುಸು ಸಿಟ್ಟಿನ ಬಾಲಕನಾಗಿದ್ದ ಎಂದು ಸ್ಥಳಿಯರು ಮಾಹಿತಿ ನೀಡಿದ್ದು, ಆಗಾಗ್ಗೆ ಕೆಲ ವಿಚಾರಗಳಿಗೆ ಅಪ್ಪ-ಅಮ್ಮನ ಜೊತೆ ಜಗಳವಾಡುತ್ತಿದ್ದನು. ನಾಲ್ಕು ದಿನಗಳ ಹಿಂದೆ ಸ್ವಂತ ಊರು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜಾತ್ರೆ ಇದ್ದ ಕಾರಣ ಎಲ್ಲರೂ ಹೋಗಿದ್ದರು. ಈ ವೇಳೆ ಅಪ್ಪನ ಜೊತೆ ಜಗಳವಾಡಿದ ಬಾಲಕ ಮನೆಯಲ್ಲಿನ ಜೋಕಾಲಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಓದಿನಲ್ಲಿ ಚುರುಕು ಹಾಗೂ ಸದಾ ಲವಲವಿಕೆಯಿಂದ ಇರುತ್ತಿದ್ದ ಬಾಲಕನ ಸಾವಿಗೆ ಶಾಲೆಯ ಶಿಕ್ಷಕ ವರ್ಗ ಕೂಡ ಬೇಸರ ವ್ಯಕ್ತಪಡಿಸಿ, ಆತನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.
