ಯುಟ್ಯೂಬ್ ನೋಡಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖದೀಮ

ಇದು ಸೋಷಿಯಲ್ ಮೀಡಿಯಾ ಯುಗ. ಇದು ಒಳ್ಳೆಯ ಕೆಲಸಕ್ಕೆ ಎಷ್ಟು ಉಪಯುಕ್ತವೋ ಅಷ್ಟೇ ಕೆಟ್ಟ ಕೆಲಸಕ್ಕೂ ಸಹಾಯವಾಗುತ್ತದೆ. ಈ ಸೋಷಿಯಲ್ ಮೀಡಿಯಾದಿಂದ ಬದುಕು ಕಟ್ಟಿಕೊಂಡವ್ರು ಎಷ್ಟೋ ಮಂದಿಯಾದ್ರೆ ಇದೇ ಸೋಷಿಯಲ್ ಮೀಡಿಯಾದಿಂದಲೇ ಬದುಕನ್ನ ನರಕ ಮಾಡಿಕೊಂಡವ್ರು ಸಾಕಷ್ಟು ಮಂದಿ. ಇದೀಗ ಸೋಷಿಯಲ್ ಮೀಡಿಯಾ ನೋಡಿ ದಿಡೀರ್ ಶ್ರೀಮಂತನಾಗಬೇಕೆಂದು ಕನಸು ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಕಂಬಿ ಹಿಂದೆ ಬಂಧಿಯಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದ ಡಿಸಿಸಿ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ್ ಹುಣಸಿಕಟ್ಟಿ ಬಂಧಿತ ಆರೋಪಿ. ಮೊದಲಿನಿಂದಲೂ ತಾನು ಶ್ರೀಮಂತನಾಗಬೇಕು ಎಂದು ಕನಸು ಕಂಡಿದ್ದ ಬಸವರಾಜ್ ಅದಕ್ಕಾಗಿ ಬ್ಯಾಂಕ್ ಗೆ ಕನ್ನ ಹಾಕಲು ನಿರ್ಧರಿಸಿದ್ದ. ಅದಕ್ಕಾಗಿ ಯುಟ್ಯೂಬ್ ನೋಡಿ ಸಾಕಷ್ಟು ತರಬೇತಿಯನ್ನ ಪಡೆದಿದ್ದ. ಅದರಂತೆ ಬ್ಯಾಂಕ್ ಗೆ ಕನ್ನ ಹಾಕಲು ಹೋಗಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ.
ಡಿಸಿಸಿ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ್ ಮಾರ್ಚ್ 5ರಂದು ಬ್ಯಾಂಕ್ ನ ಉದ್ಯೋಗಿಗಳು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಂತೆ ತನ್ನ ಕೆಲಸ ಶುರು ಮಾಡಿದ್ದ. ಮೊದಲು ಮರುಗೋಡದ ಮಹಾಂತ ಸ್ವಾಮೀಜಿಗಳ ಫೋಟೋಗೆ ಕೈ ಮುಗಿದು ಬಳಿಕ ತಾನು ಮೊದಲೇ ತಂದಿದ್ದ ನಕಲಿ ಕೀ ಬಳಸಿ ಸ್ಟ್ರಾಂಗ್ ರೂಂ, ಲಾಕರ್ ಗಳನ್ನ ಓಪನ್ ಮಾಡಿದ್ದಾನೆ. 4.37.59.000 ರೂಪಾಯಿ ಹಾಗೂ 3 ಕೆಜಿ ಚಿನ್ನವನ್ನ ಬ್ಯಾಗ್ ನಲ್ಲಿ ಹಾಕಿಕೊಳ್ಳುತ್ತಾನೆ. ಬಳಿಕ ಸಿಸಿಟಿವಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ತೆಗೆದು ಯಾವುದೇ ಸಾಕ್ಷಿ ಇಲ್ಲವೆಂದು ಖಚಿತ ಪಡಿಸಿಕೊಂಡು ಸ್ನೇಹಿತರ ಜೊತೆ ಕಾರಿನಲ್ಲಿ ಹೋಗುತ್ತಾನೆ.
ಮರುದಿನ ಬ್ಯಾಂಕ್ ನ ಬಾಗಿಲು ತೆಗೆದಾಗ ದರೋಡೆಯಾಗಿರೋದು ಬೆಳಕಿಗೆ ಬಂದಿದೆ. ಮೊದಲಿಗೆ ಅಮಾಯಕನಂತೆ ನಟಿಸಿದ್ದ ಬಸವರಾಜ್ ಸಾಕಷ್ಟು ವಿಚಾರಣೆ ಬಳಿಕ ಕಳ್ಳತನ ಮಾಡಿರೋದಾಗಿ ಬಾಯಿ ಬಿಟ್ಟಿದ್ದಾನೆ. ಕದ್ದ ಹಣ ಹಾಗೂ ಬಂಗಾರವನ್ನ ಜಮೀನಿನಲ್ಲಿ ಆಳವಾದ ಗುಂಡಿ ತೋಡಿ ಹೂತಿಟ್ಟಿದ್ದು ಪೊಲೀಸರು ಅದನ್ನ ಹೊರ ತೆಗೆದಿದ್ದಾರೆ.
ಒಂದೇ ಒಂದು ವಾರದಲ್ಲಿ ಆರೋಪಿಗಳನ್ನ ಮಾಲು ಸಮೇತ ಹಿಡಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.




