ಸಂಬಂಧಿಕರ ಕಿರುಕುಳ ತಾಳಲಾರದೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ವೃದ್ದೆ

ಮೈಸೂರು: ಜಮೀನು ವಿಚಾರದಲ್ಲಿ ದಾಯಾದಿಗಳ ಕಿರುಕುಳದಿಂದ ಬೇಸತ್ತು 70 ವರ್ಷದ ವೃದ್ಧೆಯೊಬ್ಬರು ದಯಾ ಮರಣಕ್ಕಾಗಿ ಅರ್ಜಿ ಸಲ್ಲಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಸರಗೂರು ತಾಲೂಕಿನ ಹೆಡಿಯಾಲ ಗ್ರಾಮದ ನಿವಾಸಿ ಬೋರಮ್ಮ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ ವೃದ್ದೆ. ದಯಾದಿಗಳ ಕಿರುಕುಳದಿಂದ ಮುಕ್ತಿ ಕೊಡಿಸಿ ಇಲ್ಲದಿದ್ದಲ್ಲಿ ದಯಾ ಮರಣಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ವೃದ್ಧ ಮಹಿಳೆ ಬೋರಮ್ಮ ಮತ್ತು ಭೋಗಪ್ಪ ದಂಪತಿಗೆ ಸರಗೂರು ತಾಲೂಕಿಗೆ ಸೇರಿದ ಸರ್ವೆ ನಂಬರ್ 16 ಪಿ 21ರಲ್ಲಿ 2 ಎಕರೆ ಕೃಷಿ ಭೂಮಿ ಇದೆ.
ಪುತ್ರ ವಿಷಕಂಠ ಮತ್ತು ಕುಟುಂಬದವರ ಜೊತೆಗೂಡಿ 40 ವರ್ಷಗಳಿಂದ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ. ಅಲ್ಲದೇ ಸ್ಥಳೀಯ ಬ್ಯಾಂಕ್ಗಳಿಂದಲೂ ಬೋರಮ್ಮ ಸಾಲ ಸೌಲಭ್ಯ ಪಡೆದಿದ್ದಾರೆ. ಬೋರಮ್ಮಗೆ ಸೇರಿದ ಜಮೀನನ್ನು ದಾಯಾದಿಗಳಾದ ಕಾಳಪ್ಪ ಮತ್ತು ಮಹಾದೇವಪ್ಪ ಎಂಬುವವರು ಕೃಷಿ ಭೂಮಿ ನಮಗೆ ಸೇರಿದ್ದು ಎಂದು ಕಿರುಕುಳ ನೀಡಿದ್ದಾರೆ.
ಅಲ್ಲದೇ ಹೆಚ್ಡಿ ಕೋಟೆ ಮತ್ತು ಹುಣಸೂರು ನ್ಯಾಯಾಲಯಗಳಿಗೆ ದಾವೆ ಹೂಡಿದ್ದರು. ಎರಡು ನ್ಯಾಯಾಲಯಗಳಲ್ಲಿಯೂ ಬೋರಮ್ಮ ಪರ ತೀರ್ಪು ಬಂದಿದೆ.
ಗ್ರಾಮದ ಮುಖಂಡರೂ ಸಹ ಬೋರಮ್ಮ ಪರ ಬೆಂಬಲ ಸೂಚಿಸಿದ್ದಾರೆ. ಹೀಗಿದ್ದರೂ ದಾಯಾದಿಗಳಿಂದ ನಿರಂತರ ಕಿರುಕುಳ ತಪ್ಪಿಲ್ಲ.
ಜಮೀನಿಗೆ ಪ್ರವೇಶಿಸಲು ಬಿಡುತ್ತಿಲ್ಲ.ಜೀವ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದಾರೆ. ಇವರ ಕಿರುಕುಳ ತಪ್ಪಿಸುವಂತೆ ಬೋರಮ್ಮ ಕಣ್ಣೀರಿಟ್ಟು ಕೇಳಿಕೊಳ್ಳುತ್ತಿದ್ದಾರೆ. ಸರಗೂರು ಠಾಣೆಯಲ್ಲಿ ಅನೇಕ ಬಾರಿ ಮುಚ್ಚಳಿಕೆ ಮಾಡಿಸಲಾಗಿದ್ದನ್ನೂ ಲೆಕ್ಕಿಸದೇ ದಾಯಾದಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.



