ಮಾ. 17ಕ್ಕೆ ಪುನೀತ್ ಹುಟ್ಟುಹಬ್ಬ; ಮೂರು ಸಾವಿರ ಮಠದಲ್ಲಿ ಅಪ್ಪು ಬೆಳಕು ಕಾರ್ಯಕ್ರಮ

ಹುಬ್ಬಳ್ಳಿ: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರರ 47 ನೇ ಜನ್ಮದಿನದ ಹಿನ್ನೆಲೆಯಲ್ಲಿ ಅಪ್ಪು ಬೆಳಕು ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಇದೇ ಮಾ. 17 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಮೂರುಸಾವಿರ ಮಠದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ವಿವರಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಿ. ವರನಟ ಡಾ.ರಾಜ್ ಕುಮಾರ್ ಅವರು ನಿಧನ ನಂತರ, ಪುನೀತ ರಾಜಕುಮಾರವರು ಕೂಡಾ ತಮ್ಮ ಕಣ್ಣು ದಾನ ಮಾಡುವ ಮೂಲಕ ಯುವಕರಿಗೆ ಸ್ಪೂರ್ತಿಯಾದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ರಾಜ್ ಕುಟುಂಬವು ಕೂಡಾ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಹುಬ್ಬಳ್ಳಿಯ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂದರು.
ರಾಜ್ ಕುಟುಂಬದ ಪುನೀತ್ ಅವರು ಸಿದ್ಧಾರೂಢರ ಪರಮಭಕ್ತರಾಗಿದ್ದರು. ಅವರ ಅಕಾಲಿಕ ನಿಧನ ಪ್ರತಿಯೊಬ್ಬರಿಗೂ ಅತೀವ ದುಃಖ ತಂದಿದೆ. ಈ ದಿಸೆಯಲ್ಲಿ ನಟ ಪುನೀತ್ರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಅಪ್ಪು ಬೆಳಕು ಎಂಬ ನೇತ್ರದಾನ ಶಿಬಿರವನ್ನು ಹೊಸೂರಿನ ಡಾ.ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
