ಅರವಿಂದ ಬೆಲ್ಲದ ಮುಂದೊಂದು ದಿನ ಸಿಎಂ ಆಗುತ್ತಾರೆ: ಲಕ್ಷ್ಮಣ ಭವಿಷ್ಯ

ಧಾರವಾಡ: ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಇದೇ ಸರ್ಕಾರದಲ್ಲಿ ಸಚಿವರಾಗುತ್ತಾರೆ. ಮುಂದೊಂದು ಒಂದು ದಿನ ಅವರಿಗೆ ಮುಖ್ಯಮಂತ್ರಿ ಸ್ಥಾನ ತಾನಾಗಿಯೇ ಒಲಿದು ಬರಲಿದೆ ಎಂದು ಅಖಿಲ ಕರ್ನಾಟಕ ಸುಡುಗಾಡು ಸಿದ್ಧರ ಸಂಘದ ಅಧ್ಯಕ್ಷ ಲಕ್ಷ್ಮಣ ಭವಿಷ್ಯ ನುಡಿದಿದ್ದಾರೆ.
ಭಾನುವಾರ ರಾತ್ರಿ ಕೆಲಗೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಅವರು ಶಾಸಕ ಬೆಲ್ಲದ ಅವರನ್ನು ಹಾಡಿ ಹೊಗಳಿದ್ದಾರೆ. ಬೆಲ್ಲದ ಅವರಿಗೆ ಮುಖ್ಯಮಂತ್ರಿ ಸ್ಥಾನ ತಾನಾಗಿಯೇ ಬರುವ ಯೋಗ ಇದೆ. ಶಾಸಕ ಅರವಿಂದ ಬೆಲ್ಲದ ಅವರನ್ನು ಜನರು ದೇವರಿಗೆ ಹೋಲಿಸಿದ್ದಾರೆ. ಇವರು ಭಗವಂತ, ಪಾಂಡುರಂಗ ಇದ್ದಂತೆ. ಕ್ಷೇತ್ರದ ಜನರಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಇವರು ಒಳ್ಳೆಯ ಹೆಸರು ಮಾಡಿದ್ದಾರೆ. ಪಶ್ಚಿಮ ಕ್ಷೇತ್ರದ, ನೆಹರು ನಗರ, ಕೆಲಗೇರಿ, ತೇಜಸ್ವಿ ನಗರ, ರಾಜೀವ್ ಗಾಂಧಿನಗರ ಎಲ್ಲ ಕಡೆ ಉತ್ತಮ ಕೆಲಸ ಮಾಡಿದ್ದಾರೆ. ಮತದಾರರು ಚುನಾವಣೆಯಲ್ಲಿ ಮತದಾನ ನೀಡುವ ಮೂಲಕ ಇವರ ಋಣ ತೀರಿಸಿಕೊಳ್ಳಿ ಎಂದು ಕರೆ ನೀಡಿದರು.
