ಬೂಕನಕೆರೆ 9 ಕೋಟಿ ಕಾಮಗಾರಿಗೆ ಸಚಿವ ನಾರಾಯಣಗೌಡ ಚಾಲನೆ

ಮಂಡ್ಯ: ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ, ಕೃಷ್ಣರಾಜಪೇಟೆ ಶಾಸಕ ಡಾ.ನಾರಾಯಣಗೌಡ, ಕೆ.ಆರ್ ಪೇಟೆ ವಿಧಾನಸಭೆ ಸೋಮವಾರ ಬೂಕನಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 9 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಬೂಕನಕೆರೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ 6.50 ಕೋಟಿ ವೆಚ್ಚದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ 20 ಹಾಸಿಗೆಗಳ ವಾರ್ಡ್ ನಿರ್ಮಾಣ, ವೈದ್ಯಾಧಿಕಾರಿಗಳು ಹಾಗೂ ದಾದಿಯರ ವಸತಿ ಗೃಹಗಳ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸಚಿವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಬೂಕನಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10 ಲಕ್ಷದ ವೆಚ್ಚದಲ್ಲಿ ನಿರ್ಮಿಸಲಾಗಿರುವ ಘನ ತ್ಯಾಜ್ಯಘಟಕ, 2 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಡಿಜಿಟಲ್ ಲೈಬ್ರರಿಯನ್ನು ಸಚಿವರು ಉದ್ಘಾಟಿಸಿದರು. ಅಮೃತ ಗ್ರಾಮಪಂಚಾಯತ್ ಯೋಜನೆಯಡಿಯಲ್ಲಿ 1.87 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಜೊತೆಗೆ ಕಂದಾಯ ಇಲಾಖೆಯಿಂದ ಸಂತೇಬಾಚಹಳ್ಳಿ ಹೋಬಳಿಯಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃಧ್ಯಾಪ್ಯ ವೇತನ ಸೇರಿದಂತೆ ಹಲವು ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ರೇಷ್ಮೆ ಇಲಾಖೆಯಿಂದ ರೇಷ್ಮೆ ಬೆಳೆಗಾರರಿಗೆ ನೀಡುವ ಗುರುತಿನ ಚೀಟಿ ಮತ್ತು ಪಾಸ್ ಬುಕ್ನ್ನು ಸಚಿವ ಡಾ.ನಾರಾಯಣಗೌಡ ವಿತರಿಸಿದರು.
ಈ ವೇಳೆ, ಮಾತನಾಡಿದ ಅವರು, ಬೂಕನಕೆರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಹುಟ್ಟೂರು. ಬಿಎಸ್ ಯಡಿಯೂರಪ್ಪನವರು ಹುಟ್ಟಿದ ಊರಿನ ಋಣ ತೀರಿಸುವ ಕೆಲಸ ಮಾಡಿದ್ದಾರೆ. ಕೆಆರ್ ಪೇಟೆಯನ್ನ ಎರಡನೇ ಶಿಕಾರಿಪುರ ಮಾಡುವ ಗುರಿ ಹೊಂದಿದ್ದೇನೆ. ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 1700 ಕೋಟಿ ಅನುದಾನವನ್ನು ನೀಡಿದರು. ಕೊಟ್ಟ ಮಾತನ್ನ ಈಡೇರಿಸುವ ಏಕೈಕ ನಾಯಕ ಅಂದರೇ ಯಡಿಯೂರಪ್ಪನವರು ಮಾತ್ರ ಎಂದರು.
ಗವಿಮಠಕ್ಕೆ 9 ಕೋಟಿ
ಇಡೀ ಮಂಡ್ಯ ಜಿಲ್ಲೆಗೆ 2500 ಕೋಟಿ ಅನುದಾನ ನೀಡಿದ್ದಾರೆ. ಜಲಧಾರೆಯ ಯೋಜನೆಯ ಮೊದಲ ಹಂತದಲ್ಲಿ 700 ಕೋಟಿ ಅನುದಾನ, ಎರಡನೇ ಹಂತದಲ್ಲಿ 1700 ಕೋಟಿ ರೂಪಾಯಿ ಅನುದಾನವನ್ನು ನೀಡಿದೆ. ನಮ್ಮ ಬಿಜೆಪಿ ಸರ್ಕಾರ ಮಾತ್ರ ಇಷ್ಟು ಅಭಿವೃದ್ಧಿ ಯೋಜನೆಗಳನ್ನು ನೀಡಿದೆ. ಇನ್ನೂ ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಅವುಗಳಿಗೂ ಅಗತ್ಯ ಅನುದಾನ ತರಲು ಸಿದ್ದನಿದ್ದೇನೆ. ಗವಿ ಮಠಕ್ಕೆ 9 ಕೋಟಿ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ರೇಷ್ಮೆ ಇಲಾಖೆ ಹಾಗೂ ಕ್ರೀಡಾ ಇಲಾಖೆಯಲ್ಲೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ನಾನು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ 350 ರೂ .ನಷ್ಟಿದ್ದ ರೇಷ್ಮೆಗೂಡಿನ ದರ ಒಂದು ಸಾವಿರ ರೂಪಾಯಿ ಮುಟ್ಟಿದೆ. ಇದು ಖುಷಿಯನ್ನು ನೀಡಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.



