
ಬೆಂಗಳೂರು: 25 ವರ್ಷಗಳ ನಂತರ ಕಾಂಗ್ರೆಸ್ ಗೆ ಗಂಡು ಮಗು ಹುಟ್ಟಿದೆ, ಆ ರೀತಿ ಅವರು ಸಂಭ್ರಮಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಲೇವಡಿ ಮಾಡಿದರು.
ವಿಧಾನ ಸೌಧದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಿಲ್ಲಿ ಗೆದ್ದಿದ್ದೇವೆ ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತೇವೆ,ಬರುವಂತಹ ದಿನಗಳಲ್ಲಿ ಎಲ್ಲಾ ಕಡೆ ಅಧಿಕಾರ ತರುವ ಕೆಲಸ ಮಾಡುತ್ತೇವೆ. ಬಿಜೆಪಿ ಬುಡ ಅಲ್ಲಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ಕಿಡಿಕಾರಿದರು.
25 ವರ್ಷ ಮದ್ವೆ ಆದ್ಮೆಲೆ ಗಂಡು ಮಗು ಹುಟ್ಟದ ಹಾಗೇ ಅವ್ರು ಸಂಭ್ರಮಿಸುತ್ತಿದ್ದಾರೆ. ನಾಮಕರಣ ಮಾಡಿ ಒಳ್ಳೆಯ ಹೆಸರಿಟ್ಟರೇ ನಾನು ಭಾಗಿಯಾಗುತ್ತೇನೆ ಎಂದು ಸಚಿವರು ಕಾಂಗ್ರೆಸ್ ಪಕ್ಷವನ್ನು ಕಾಲೆಳೆದರು.
ಪುರಸಭೆ, ಪ.ಪಂ.ಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ನಗರಸಭೆಯಲ್ಲಿ ಕಮಲ ಅರಳಿದೆ. ಪುರಸಭೆ ಚುನಾವಣೆಯಲ್ಲಿ ಒಟ್ಟು 441 ಸ್ಥಾನಗಳಲ್ಲಿ ಕಾಂಗ್ರೆಸ್ 201 ಸ್ಥಾನಗಳನ್ನು ಪಡೆದು, ಗೆದ್ದು ಬೀಗಿದೆ. ಬಿಜೆಪಿ 176 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಅಂತೆಯೇ ಜೆಡಿಎಸ್ 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರ 43 ಸ್ಥಾನಗಳಿಗೆ ಜಯ ಲಭಿಸಿದೆ.
ಪ.ಪಂ. ಚುನಾವಣೆಯಲ್ಲಿಯೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಒಟ್ಟು 557 ಸ್ಥಾನಗಳಲ್ಲಿ ಕಾಂಗ್ರೆಸ್ 236 ಸ್ಥಾನಗಳಲ್ಲಿ ಗೆದ್ದು, ಭರ್ಜರಿ ಜಯ ಸಾಧಿಸಿದೆ. ಬಿಜೆಪಿ 194 ಸ್ಥಾನಗಳಲ್ಲಿ ಗೆದ್ದರೆ, ಪಕ್ಷೇತರರು 135 ಸ್ಥಾನಗಲ್ಲಿ ಗೆಲುವು ಸಾಧಿಸಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಕೇವಲ 12 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.



