ರಾಷ್ಟ್ರಧ್ವಜ ಕುರಿತ ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಸರಣಿ ಟ್ವೀಟ್

ದೇಶ, ಸಂವಿಧಾನ, ತ್ರಿವರ್ಣ ಧ್ವಜಗಳನ್ನು ಬಿಜೆಪಿ ಸದಾ ಅವಮಾನಿಸಿಕೊಂಡೇ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಂಪು ಕೋಟೆ ಮೇಲೆ ಕೇಸರ ಧ್ವಜ ಹಾರಿಸಿರುವುದಾಗಿ ಸಚಿವ ಈಶ್ವರಪ್ಪ ಹೇಳಿಕೆಯಿಂದಾಗಿ ಕಳೆದ ಎರಡು ದಿನಗಳಿಂದ ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ವಾದ ಶುರವಾಗಿದೆ.
ಇದೀಗ ತ್ರಿವರ್ಣ ಧ್ವಜ ಕುರಿತು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ದೇಶದಲ್ಲಿ ತ್ರಿವರ್ಣಕ್ಕೆ ಅಪರಿಮಿತ ಗೌರವವಿದೆ. ಆದರೆ ಬಿಜೆಪಿಗರಿಗೆ ಅಸಹನೆ ಇದೆ. ದೇಶದ ಪ್ರಧಾನಿಯಾದವರು ತ್ರಿವರ್ಣದಲ್ಲಿ ಮುಖ ಒರೆಸಿಕೊಳ್ಳುವ ಮೂಲಕ RSSನ ರಾಷ್ಟ್ರಧ್ವಜದ ದ್ವೇಷವನ್ನು ವ್ಯಕ್ತಪಡಿಸಿದ್ದರು. ಈಗ ಈಶ್ವರಪ್ಪನವರ ಸರದಿ ಎಂದು ವಾಗ್ವಾದ ನಡೆಸಿದೆ.
ರಾಷ್ಟ್ರಧ್ವಜವನ್ನು ಬದಲಿಸುತ್ತೇವೆ ಎಂಬ ಈಶ್ವರಪ್ಪನವರ ದೇಶದ್ರೋಹಿ ಹೇಳಿಕೆಯನ್ನು ಬೆಂಬಲಿಸುವ ಬಿಜೆಪಿಯವರು ಧ್ವಜ ಪ್ರದರ್ಶಿಸಿದ ಕಾಂಗ್ರೆಸ್ಗೆ ಗೌರವಿಸುವ ಪಾಠ ಮಾಡುವುದು ನರಿಗಳು ನ್ಯಾಯ ಹೇಳಿದಂತೆಯೇ ಸರಿ! ದೇಶಕ್ಕೆ, ಸಂವಿಧಾನಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವಿಸುವುದನ್ನು ಮೊದಲು ಬಿಜೆಪಿ ಕಲಿಯಬೇಕಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ತ್ರಿವರ್ಣ ಧ್ವಜವನ್ನು ಅಪಶಕುನ ಎಂದು ಅವಮಾನಿಸಿದ್ದು RSS, ಈಗ ಬಿಜೆಪಿ ರಾಷ್ಟ್ರಧ್ವಜವನ್ನು ಬದಲಿಸುವ ಮಾತನಾಡುತ್ತಿದೆ. ಧ್ವಜ ನೀತಿ ಸಂಹಿತೆಯ ಪಾಠ ಬಿಜೆಪಿಗೆ ಅಗತ್ಯವಿದೆ. ಕಾಂಗ್ರೆಸ್ ಸದನದಲ್ಲಿ ಧ್ವಜವನ್ನು ಗೌರವಯುತವಾಗಿ ಪ್ರದರ್ಶಿಸಿದ್ದು ಅವಮಾನವಲ್ಲ ಬಿಜೆಪಿ ಮಾಡಿದ ಈ ಕೃತ್ಯ ಬಹುದೊಡ್ಡ ಅವಮಾನ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
