
ಬೆಂಗಳೂರು: ಕೋವಿಡ್ ಕಠಿಣ ನಿಮಯಗಳನ್ನು ದುರುದ್ದೇಶಿತಪೂರಿತವಾಗಿ ಜಾರಿಗೊಳಿಸಿಲ್ಲ. ಎಲ್ಲವೂ ಕಣ್ಣ ಮುಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ನಿಲ್ಲಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.ಯಾವುದು ಒಳ್ಳೇಯದು, ಯಾವುದು ಕೆಟ್ಟದ್ದು ಅನ್ನೋ ತಿಳುವಳಿಕೆ ಅವರಿಗಿದೆ ಎಂದುಕೊಂಡಿದ್ದೇನೆ ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಹದಗೆಡೆದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಕಠಿಣ ನಿಮಯ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ. ಇದಕ್ಕೆ ರಾಜಕೀಯ ಪಕ್ಷಗಳೂ ಸೇರಿದಂತೆ ಎಲ್ಲಾ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ. ಕಾಂಗ್ರೆಸ್ಸಿಗರಿಗೆ ಜನರ ಹಿತ ಕಾಪಾಡುವ ಮನಸ್ಸಿದೆ ಎಂದು ಭಾವಿಸುತ್ತೇನೆ. ಮೇಕೆದಾಟು ಪಾದಯಾತ್ರೆ ಮಾಡಬೇಕೆ? ಬೇಡವೇ ಎಂಬುದರ ಕುರಿತು ಅವರು ಆಲೋಚಿಸಲಿ ಎಂದರು.
ಮಹಾರಾಷ್ಟ್ರತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಕೋವಿಡ್ ಪರಿಸ್ಥಿತಿ ಹೇಗೆ ಬಿಗಡಾಯಿಸಿದೆ ಎಂಬುದು ಎಲ್ಲರಿಗೂ ಗೊತ್ತು. ಕಾಂಗ್ರೆಸ್ ನವರು ಅನೇಕ ವರ್ಷ ಅಧಿಕಾರದಲ್ಲಿದ್ದರು. ಈಗಿನ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಅವರು ಅರ್ಥ ಮಾಡಿಕೊಳ್ಳಬೇಕು. ಜನ ಎಲ್ಲಾ ನೋಡುತ್ತಿದ್ದಾರೆ. ಎಲ್ಲವನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಮುಖ್ಯಮಂತ್ರಿ, ಸಚಿವರಾದವರು ಕಾಂಗ್ರೆಸ್ಸಿನಲ್ಲಿದ್ದಾರೆ. ಹಠ ಮುಂದುವರಿಸಿದರೆ ಕಾನೂನು ರಿತ್ಯ ಕ್ರಮ ಅನಿವಾರ್ಯ ಎಂದರು.
ರಾಜ್ಯಕ್ಕೆ ಮೂರನೇ ಸ್ಥಾನ
ರಾಜ್ಯದಲ್ಲಿ 15 ರಿಂದ 18 ವಯಸ್ಸಿನ ಮೂರೂವರೇ ಲಕ್ಷ ಮಕ್ಕಳಿಗೆ ಈಗಾಗಲೇ ಲಸಿಕೆ ಹಾಕಲಾಗಿದೆ. ರಾಜ್ಯದಲ್ಲಿ ಈಗಾಗಲೇ ಶೇ.25ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಈ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದೆ. ಮಕ್ಕಳು ಮೊದಲ ಡೋಸ್ ಪಡೆದ 28 ದಿನಗಳ ನಂತರ 2ನೇ ಡೋಸ್ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಒಮಿಕ್ರಾನ್ ಭಯಬೇಡ
ಒಮಿಕ್ರಾನ್ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಎರಡು ಡೋಸ್ ಲಸಿಕೆ ಪಡೆದವರ ಮೇಲೆ ಅದು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗುವುದಿಲ್ಲ. ಗಂಟಲಲ್ಲಿರುತ್ತದೆ. ಹೀಗಾಗಿ ಯಾರೂ ಭಯಪಡಬೇಕಿಲ್ಲ. ಅಲ್ಲದೇ ಕೊರೋನಾ ಮೂರನೇ ಅಲೆ ದೀರ್ಘ ಕಾಲ ಇರುವುದಿಲ್ಲ ಎಂದು ಸಚಿವ ಸುಧಾಕರ್ ಅಭಯ ನೀಡಿದರು.
