ಅ. 3, 4ರಂದು jds ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ಹಾಗೂ ಒಬಿಸಿ ವಿಭಾಗದ ಕಾರ್ಯಾಗಾರ: ಕುಮಾರಸ್ವಾಮಿ

ರಾಮನಗರ : ಕಳೆದ 27 ರಿಂದ ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಗಾರದ ಮೊದಲ ಹಂತ ನಾಳೆ ಸಂಜೆ (ಸೆಪ್ಟೆಂಬರ್ 30) ಮುಕ್ತಾಯವಾಗಲಿದೆ.
ಎರಡನೇ ಹಂತದ ಕಾರ್ಯಗಾರವೂ ಅಕ್ಟೋಬರ್ 3 ಮತ್ತು 4 ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಅ. 3ರಂದು ಬೆಳಗ್ಗೆ 9 ಗಂಟೆಗೆ ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಪ್ರತಿನಿಧಿಗಳ ಕಾರ್ಯಗಾರ ಹಾಗೂ ಅ.4ರಂದು ಅದೇ ನಿಗದಿತ ಸಮಯದಿಂದ ಎಸ್ ಸಿ, ಎಸ್ ಟಿ ಹಾಗೂ ಒಬಿಸಿ ವಿಭಾಗದ ಪ್ರತಿನಿಧಿಗಳ ಕಾರ್ಯಗಾರ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಸೆಪ್ಟೆಂಬರ್ 27ರಿಂದ 30ರ ವರೆಗೆ ನಡೆದ ಕಾರ್ಯಗಾರದಂತೆ ಅಲ್ಪಸಂಖ್ಯಾತರ ಮತ್ತು ಎಸ್ ಸಿ, ಎಸ್ ಟಿ ಹಾಗೂ ಒಬಿಸಿ ವಿಭಾಗದ ಕಾರ್ಯಗಾರವೂ ನಡೆಯುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ನಿಗದಿ ಮಾಡುವುದು ಹಾಗೂ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ಟಾಸ್ಕ್ ಗಳನ್ನು ಕೊಡಲಾಗುವುದು ಎಂದು ಅವರು ತಿಳಿಸಿದರು.
ಈ ಸಮುದಾಯಗಳಿಗೆ ವಿಶ್ವಾಸ ತುಂಬುವುದು ಸೇರಿ ಚುನಾವಣೆಗೆ ಸಜ್ಜುಗೊಳಿಸುವುದು ಈ ಕಾರ್ಯಾಗಾರದ ಉದ್ದೇಶ. ಈ ವಿಭಾಗಕ್ಕೆ ಸೇರಿದ ಎಲ್ಲಾ ಮುಖಂಡರು ಭಾಗಿಯಾಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.



