ಕೆವೈಸಿ ಹಸರಲ್ಲಿ ವಂಚನೆ: ಲಕ್ಷಗಟ್ಟಲೇ ಹಣ ಕಳೆದುಕೊಂಡ ವ್ಯಕ್ತಿ

ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಆನ್ಲೈನ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದ್ದು, ಇದು ಅವಳಿ ನಗರದ ಜನತೆ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಲ್ಲಿ ಆತಂಕ ಮೂಡಿಸುತ್ತಿದೆ. ಈಗಾಗಲೇ ಹಲವು ರೀತಿಯಲ್ಲಿ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಾ ಬಂದಿದ್ದರೂ ಸಹ ಸೈಬರ್ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ.
ಈಗ ಕೆವೈಸಿ ಹೆಸರಿನಲ್ಲಿ ಧಾರವಾಡ ಮೂಲದ ವ್ಯಕ್ತಿಗೆ 2 ಲಕ್ಷ ಅಧಿಕ ಹಣ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಧಾರವಾಡದ ಭಾರತಿ ನಗರದ ಎ.ಎಸ್. ಕೊಣ್ಣೂರು ಎಂಬ ವ್ಯಕ್ತಿ ವಂಚನೆಗೊಳಗಾಗಿದ್ದಾನೆ. ಮೊಬೈಲ್ಗೆ ಏ.13ರಂದು ಅಪರಿಚಿತರು ಸಂದೇಶ ಕಳುಹಿಸಿದ್ದರು. ‘ನಿಮ್ಮ ಖಾತೆ ಬ್ಲಾಕ್ ಆಗಿದೆ. ಕೆವೈಸಿ ಅಪ್ಡೇಟ್ ಮಾಡಿ’ ಎಂದು ತಿಳಿಸಿದ್ದರು.
ಇದನ್ನು ನಂಬಿದ ಕೊಣ್ಣೂರು ಅವರು ಅದರಲ್ಲಿದ್ದ ನಂಬರ್ಗೆ ಕರೆ ಮಾಡಿದಾಗ, ತಾವು ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ, ಬ್ಯಾಂಕ್ ಅಕೌಂಟ್ ನಂಬರ್, ಎಟಿಎಂ ನಂಬರ್, ಸಿವಿವಿ ನಂಬರ್ ಹಾಗೂ ಒಟಿಪಿ ಪಡೆದಿದ್ದಾರೆ. ಆ ಸಂದೇಶವನ್ನು ನಂಬಿ ತಮ್ಮ ಬ್ಯಾಂಕಿನ ಎಲ್ಲಾ ವಿವಿರಗಳನ್ನು ನೀಡಿದ ಎ.ಎಸ್ ಕೊಣ್ಣೂರವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಖದೀಮ 2,09,344 ಲಕ್ಷ ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದಾನೆ.
ಇನ್ನೂ ಖಾತೆಯಲ್ಲಿನ ಹಣ ವಿತ್ ಡ್ರಾ ಸಂದೇಶ ಬರುತ್ತಿದಂತೆ ಆತಂಕಕ್ಕೆ ಒಳಗಾದ ವ್ಯಕ್ತಿ ಸೈಬರ್ ಠಾಣೆಯ ಮೊರೆ ಹೋಗಿದ್ದಾನೆ. ನಂತರ ಪೊಲೀಸರ ಸೂಚನೆ ಮೇರೆಗೆ ಈ ಕುರಿತು ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಹು-ಧಾ ಸೈಬರ್ ಕ್ರೈಂ ಪೊಲೀಸರು ಈಗ ತನಿಖೆ ಕೈಗೊಂಡಿದ್ದು ವಂಚನೆ ಮಾಡಿದ ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.
