Breaking NewsLatestಮೆಟ್ರೋರಾಜಕೀಯ

ಕೋವಿಡ್ ಸಂಕಷ್ಟದಲ್ಲಿಯೂ ಬೆಲೆ ಏರಿಕೆ – ಬಡವರ ಮನೆಯಲ್ಲಿ ಬೆಂಕಿ ಬಿದ್ದಿದೆ: ಕುಮಾರಸ್ವಾಮಿ ಕಿಡಿ

ಬೆಂಗಳೂರು: ರಾಜ್ಯದಲ್ಲಿ ತಲೆ ದೋರಿದ ನೆರೆ ಪರಿಸ್ಥಿತಿ, ಕೋವಿಡ್ ನಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದಾಗಿ ರೈತರು, ಶ್ರಮಿಕರು ಮತ್ತು ಬಡವರ ಮನೆಯಲ್ಲಿ ಬೆಂಕಿ ಬಿದ್ದಿದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ನಿಯಮ 69ರ ಅಡಿ ಸಾರ್ವಜನಿಕ ಮಹತ್ವದ ವಿಷಯ ಕುರಿತ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೈಲ ಹಾಗೂ ಅಡುಗೆ ಅನಿಲ ಮತ್ತಿತರ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸವಾಗುತ್ತಿದೆ. ಇದರಿಂದ ಎಷ್ಟು ಹಿರಿಯಬಹುದು ಎಂಬ ಉದ್ದೇಶದಿಂದ ಹೆಚ್ಚಿನ ತೆರಿಗೆ ವಿಧಿಸಿ ವಸೂಲು ಮಾಡಲಾಗುತ್ತಿದೆ ಎಂದರು.

ಕಷ್ಟದಲ್ಲಿರುವವರ ನೆರವಿಗೆ ಬರುವುದು ಸರ್ಕಾರದ ಕೆಲಸ. ಆದರೆ ಬೆಲೆ ಏರಿಕೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಂತ ನಿರ್ದಯವಾಗಿ ವರ್ತಿಸುತ್ತಿವೆ. ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಯಾವುದೇ ಸರ್ಕಾರಕ್ಕೆ ಆದಾಯ ಮುಖ್ಯ. ಹಾಗೆಯೇ ಜನ ಕಲ್ಯಾಣವೂ ಮುಖ್ಯ. ಹಾಗೆಂದು ಮನಸ್ಸಿಗೆ ಬಂದಂತೆ ತೆರಿಗೆ ಹಾಕುವುದು ಸರಿಯಲ್ಲ. ಜನರ ಬದುಕು ದುಸ್ತರವಾಗಿದೆ.ಎರಡು ಹೊತ್ತು ಊಟಕ್ಕೂ ಕಷ್ಟವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಬೆಲೆ ಏರಿಕೆ ಮತ್ತು ತೆರಿಗೆ ಪ್ರಹಾರ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇಂತಹ ಸಂಕಷ್ಟ ಸಂದರ್ಭದಲ್ಲಿ ಬೆಲೆ ಏರಿಕೆಯನ್ನೇ ರಾಜಕೀಯ ದಾಳವಾಗಿ ಬಳಸುವ ಬದಲು ಎಲ್ಲರೂ ಸರ್ಕಾರಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡಬೇಕು ಹಾಗೂ ಸರ್ಕಾರ ಕೂಡ ಈ ವಿಷಯದಲ್ಲಿ ಅತ್ಯಂತ ಮಾನವೀಯತೆಯಿಂದ ಜನರ ನೆರವಿಗೆ ಧಾವಿಸಬೇಕು ಎಂದು ಸಲಹೆ ನೀಡಿದರು.

ಹತೋಟಿ ಇಲ್ಲದೇ ನಿರಂತರವಾಗಿ ಬೆಲೆ ಏರಿಕೆ ಮಾಡುವ ಬದಲು ವೈಜ್ಞಾನಿಕ ಮಾನದಂಡ ಅನುಸರಿಸಬೇಕು. ಅತಿ ಮುಖ್ಯವಾಗಿ ಜನರ ಪರಿಸ್ಥಿತಿಯನ್ನು ಗಮನಿಸಿ ನಿರ್ಧಾರ ಕೈಗೊಳ್ಳಬೇಕು. ಸಮೀಕ್ಷೆಯೊಂದರ ಪ್ರಕಾರ ಒಬ್ಬ ವ್ಯಕ್ತಿ ವರ್ಷವೊಂದಕ್ಕೆ ಸರಾಸರಿ ಕನಿಷ್ಠ ಒಂದು ಲಕ್ಷ ರೂಪಾಯಿ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾನೆ. ಅಷ್ಟು ತೆರಿಗೆ ಕಟ್ಟುವವನ ಬದುಕು ಈಗ ಅಯೋಮಯವಾಗಿದೆ. ಜನರ ಬದುಕು ಹಸನು ಮಾಡುವ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂಬುದನ್ನು ಆಡಳಿತ ನಡೆಸುವವರು ಮರೆಯಬಾರದು ಎಂದರು.

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ ಅನೇಕ ಯೋಜನೆಗಳನ್ನು ಘೋಷಿಸಿದೆ. ಅದರ ಬದಲು ಗಗನಕ್ಕೇರಿರುತ್ತಿರುವ ಬೆಲೆ ಏರಿಕೆಯಿಂದಾಗಿ ಬಸವಳಿದಿರುವ ಜನರ ನೆರವಿಗೆ ಆ ಹಣವನ್ನು ಮೀಸಲಿಟ್ಟು, ವರ್ಷದ ಮಟ್ಟಿಗೆ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಮುಂದೂಡಬಹುದಾಗಿದೆ ಎಂದು ಹೇಳಿದರು.

ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಅವರ ಕಷ್ಟಕ್ಕೆ ಮಿಡಿಯಬೇಕು.ಕೋಟ್ಯಂತರ ರೂಪಾಯಿ ಯೋಜನೆಗಳಿಗೆ ಶರವೇಗದಲ್ಲಿ ಅನುಮತಿ ನೀಡಲಾಗುತ್ತಿದೆ. ಅಂತಹ ಯೋಜನೆಗಳಿಗಿಂತ ಮುಖ್ಯವಾಗಿ ಜನರ ಹಸಿವು ನೀಗಿಸಲು ಸರ್ಕಾರ ಮೊದಲ ಆದ್ಯತೆ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button