Bidadi Double Murder: ಬಿಡದಿಯಲ್ಲಿ ವಾಯುಸೇನೆಯ ನಿವೃತ್ತ ಪೈಲಟ್ ಹಾಗೂ ಪತ್ನಿಯ ಹತ್ಯೆ

ರಾಮನಗರ : ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಿಡದಿಯ ಈಗಲ್ಟನ್ ಹಾಗೂ ಗಾಲ್ಫ್ ವಿಲೇಜ್ ಆವರಣದಲ್ಲಿರುವ ಈಗಲ್ಟನ್ ವಿಲ್ಲಾ ಸಿ-21 ರಲ್ಲಿ ನಡೆದಿದೆ. ಕೊಲೆಯಾದವರನ್ನು ರಘುರಾಜ್(70) ಹಾಗೂ ಅವರ ಪತ್ನಿ ಆಶಾ(63) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಅಥವಾ ಮಂಗಳವಾರ ಮುಂಜಾನೆ ಈ ಕೃತ್ಯ ನಡೆದಿರಬಹುದು. ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪುತ್ರನಿಂದ ಬೆಳಕಿಗೆ ಬಂದ ಹತ್ಯೆ ಪ್ರಕರಣ :
ಚೆನ್ನೈ ಮೂಲದವರಾದ ರಘುರಾಜ್ ವಾಯುಸೇನೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದ್ದು, ನಿವೃತ್ತಿ ಬಳಿಕ ಈಗಲ್ಟನ್ನಲ್ಲಿ ವಿಲ್ಲಾ ಖರೀದಿಸಿ ಇಲ್ಲಿಯೇ ನೆಲೆಸಿದ್ದರು. ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದು, ಕೆಲಸದ ನಿಮಿತ್ತ ದೆಹಲಿಯಲ್ಲಿ ಇದ್ದಾರೆ.
ಇದನ್ನೂ ಓದಿ:
ರಘುರಾಜ್ ಸೋಮವಾರ ರಾತ್ರಿಯಿಂದಲೂ ಮೊಬೈಲ್ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಅವರ ಪುತ್ರ ಈಗಲ್ಟನ್ ರೆಸಾರ್ಟ್ನಲ್ಲಿನ ಭದ್ರತಾ ಸಿಬ್ಬಂದಿಗೆ ಮಂಗಳವಾರ ಮಧ್ಯಾಹ್ನ ಕರೆ ಮಾಡಿ ವಿಚಾರಿಸಿದ್ದಾರೆ. ಭದ್ರತಾ ಸಿಬ್ಬಂದಿಯು ಮನೆಗೆ ಬಂದು ನೋಡಿದಾಗ ಅಲ್ಲಿಂದ ಒಬ್ಬ ವ್ಯಕ್ತಿ ಓಡುವುದು ಕಂಡಿದೆ. ಮನೆಯ ಒಳಗೆ ಪ್ರತ್ಯೇಕ ಕೊಠಡಿಗಳಲ್ಲಿ ರಘುರಾಜ್ ಹಾಗೂ ಆಶಾ ಅವರ ಶವಗಳು ಪತ್ತೆಯಾದವು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ಸಂತೋಷ್ ಬಾಬು ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಲ್ಲಾಗೆ ಆಗಾಗ್ಗೆ ಬಿಹಾರ ಮೂಲದ ಪರಿಚಯಸ್ಥ ವ್ಯಕ್ತಿಯೊಬ್ಬ ಬಂದು ಹೋಗುತ್ತಿದ್ದು, ಆತನೇ ಕೃತ್ಯ ಎಸಗಿರುವ ಶಂಕೆ ಇದೆ. ಯಾವ ಉದ್ದೇಶಕ್ಕೆ ಕೊಲೆ ಮಾಡಲಾಗಿದೆ ಎಂಬುದರ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
