
ಬೆಂಗಳೂರು: ದಲಿತ ಸಿಎಂ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಮತ್ತೆ ಕೆಣಕಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ, “ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರೇ, ನಿಮ್ಮನ್ನು ನೀವೇ ಕಾಂಗ್ರೆಸ್ ರಥ ಎಳೆಯುವ ಡಬಲ್ ಎಂಜಿನ್ ಎಂದು ಬಿಂಬಿಸಿಕೊಂಡಿದ್ದೀರಿ, ಶುಭವಾಗಲಿ!!! ನಿಮ್ಮ ಡಬಲ್ ಎಂಜಿನ್ ಸಂಘಟನೆ ಸಂದರ್ಭದಲ್ಲಾದರೂ ದಲಿತ ಸಿಎಂ ವಿಚಾರ ನನಸಾಗುವುದೇ?” ಎಂದು ಪ್ರಶ್ನಿಸಿದೆ.
ಇದಲ್ಲದೇ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಜನಾಕ್ರೋಶ ಸಭೆ ಕುರಿತು ಟಾಂಗ್ ನೀಡಿರುವ ಬಿಜೆಪಿ , “ಕಾಂಗ್ರೆಸ್ಸಿಗರೇ, ನೀವು ಭಾರತೀಯರಿಗೆ ಮಾಡಿದ ಐತಿಹಾಸಿಕ ಅನ್ಯಾಯವನ್ನು ಮರೆಯಲು ಸಾಧ್ಯವೇ? ಈ ಕಾರಣಕ್ಕಾಗಿ ಜನರೇ ನಿಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆ. ಜನಾಕ್ರೋಶದ ಬಿಸಿಯಲ್ಲಿ ಕಾಂಗ್ರೆಸ ಪಕ್ಷ ಅಧಿಕಾರ ಕಳೆದುಕೊಂಡು ಬೀದಿಗೆ ಬಂದಿರುವುದು ನಿಜವಲ್ಲವೇ?” ಎಂದು ಕಾಲೆಳೆದಿದೆ.
ಇನ್ನೊಂದು ಟ್ವೀಟ್ ನಲ್ಲಿ “ರಾಜ್ಯಾದ್ಯಂತ ಜನಾಕ್ರೋಶ ಸಭೆ ನಡೆಸುವುದಕ್ಕೆ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಕಾಂಗ್ರೆಸ್ಸಿಗರೇ ಯಾರ ವಿರುದ್ಧ ಈ ಜನಾಕ್ರೋಶ? 60 ವರ್ಷಗಳ ಕಾಲ ದೇಶ ಆಳಿದ ನಂತರವೂ ಅಸಮಾನತೆ, ಬಡತನವನ್ನು ಜೀವಂತವಿಟ್ಟ ಕಾರಣಕ್ಕಾಗಿ ಜನಾಕ್ರೋಶ ಸಭೆ ನಡೆಸುತ್ತೀರಾ?” ಎಂದು ಪ್ರಶ್ನಿಸಿದೆ.
“ಈ ದೇಶದಲ್ಲಿ ಜನಾಕ್ರೋಶವಿದೆ. ಕುಟುಂಬ ರಾಜಕಾರಣದ ವಿರುದ್ಧ ಕೋಮು ಓಲೈಕೆಯ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಸ್ವಜನ ಪಕ್ಷಪಾತದ ವಿರುದ್ಧ ಬಡವರು ಬಡವರಾಗಿಯೇ ಇರಬೇಕೆಂಬ ನಿಲುವಿನ ವಿರುದ್ಧ ಇವೆಲ್ಲವನ್ನು ದೇಶದಲ್ಲಿ ಕಾಂಗ್ರೆಸ್ ಜೀವಂತವಾಗಿಟ್ಟಿದೆ” ಎಂದಿರುವ ಬಿಜೆಪಿ ಜನವಿರೋಧಿ ಕಾಂಗ್ರೆಸ್ ಎಂದು ಟ್ಯಾಗ್ ಲೈನ್ ಹಾಕಿದೆ.



