Latestಜಿಲ್ಲಾ ಸುದ್ದಿದಾವಣಗೆರೆ
ದಾವಣಗೆರೆ : ಫೋಟೋಶೂಟ್ ಹುಚ್ಚಿಗೆ ಬಲಿಯಾದ ಯುವಕ: ರೈಲ್ವೆ ಹಳಿ ಮೇಲೆ ನಿಂತು ಪ್ರಾಣ ಕಳೆದುಕೊಂಡ

ದಾವಣಗೆರೆ: ರೈಲ್ವೆ ಹಳಿ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಬಾಲಕನೊಬ್ಬ ಮೃತಪಟ್ಟ ಘಟನೆ ನಗರದ ಡಿಸಿಎಂ ಟೌನ್ ಶಿಪ್ ಬಳಿ ಸಂಭವಿಸಿದೆ.
ಭಗತ್ ಸಿಂಗ್ ನಗರದ ಮೂರನೇ ಮುಖ್ಯರಸ್ತೆಯ 12ನೇ ಕ್ರಾಸ್ ನಿವಾಸಿ 15 ವರ್ಷದ ಸಚಿನ್ ಡೇವಿಡ್ ಮೃತಪಟ್ಟ ಬಾಲಕ. ಸ್ನೇಹಿತರೊಂದಿಗೆ ಡಿಸಿಎಂ ಟೌನ್ ಶಿಪ್ ಬಳಿಯ ರೈಲ್ವೆ ಹಳಿಯ ಮೇಲೆ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಸೆಲ್ಫಿ ತೆಗೆಯುವ ಗುಂಗಿನಲ್ಲಿದ್ದ ಈ ಬಾಲಕನಿಗೆ ಇದ್ದ ಎರಡು ಜೋಡಿ ಹಳಿಯಲ್ಲಿ ರೈಲು ಯಾವ ಹಳಿ ಮೇಲೆ ಬರುತ್ತಿದೆ ಎಂದು ಗಮನಿಸಿಲ್ಲ. ಇದೇ ಬಾಲಕನಿಗೆ ರೈಲು ಡಿಕ್ಕಿ ಹೊಡೆಯಲು ಕಾರಣವಾಗಿದೆ ಎನ್ನಲಾಗಿದೆ.
ಮೃತ ಬಾಲಕನ ಶವ ಜಿಲ್ಲಾ ಸಾರ್ವಜನಿಕ ಚಿಗಟೇರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



