ಕೆಜಿಎಫ್ 2 ಸಿನಿಮಾದ ಬಗ್ಗೆ ಭಾಸ್ಕರ್ ರಾವ್ ಅಸಮಾಧಾನ

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಈಗಾಗ್ಲೆ ಲಕ್ಷಾಂತರ ಮಂದಿ ಸಿನಿಮಾ ನೋಡಿ ಚಿತ್ರಕ್ಕೆ ಶಹಭಾಷ್ ಎಂದಿದ್ದಾರೆ. ಆದರೆ ಬೆಂಗಳೂರಿನ ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ‘ಕೆಜಿಎಫ್ 2’ ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್, ‘ಕೆಜಿಎಫ್ 2’ ಸೇರಿದಂತೆ ರೌಡಿಸಂ ಸಿನಿಮಾಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕೆಜಿಎಫ್ 2’ ಸಿನಿಮಾದಲ್ಲಿ ಕ್ರಿಮಿನಲ್ ಒಬ್ಬ ನಾಯಕನಾಗಿದ್ದಾನೆ ಎಂಬ ಬಗ್ಗೆ ಮಾತನಾಡಿರುವ ಭಾಸ್ಕರ್ ರಾವ್, ”ನಾನು ಕೆಜಿಎಫ್ 2 ಸಿನಿಮಾವನ್ನು ಒಪ್ಪುವುದಿಲ್ಲ. ಜನರಿಗೆ ಏನು ಸಂದೇಶ ಕೊಡಬೇಕೆಂದು ಹೊರಟಿದ್ದೀರಿ ನೀವು. ರೌಡಿಸಂ ಲಾಭದಾಯಕ ದಂಧೆ ಎಂದು ತೋರಿಸಬೇಕು ಎಂದುಕೊಂಡಿದ್ದೀರ?” ಎಂದು ಭಾಸ್ಕರ್ ರಾವ್ ಪ್ರಶ್ನೆ ಮಾಡಿದ್ದಾರೆ.
”ನಾನು ಬೆಂಗಳೂರು ಜಿಲ್ಲೆಯಲ್ಲಿ ಎಸ್ಪಿ ಆಗಿ ಕೆಲಸ ಮಾಡುತ್ತಿದ್ದಾಗ ದಂಡುಪಾಳ್ಯ ಗ್ಯಾಂಗ್ ಹಾವಳಿ ಜಾಸ್ತಿ ಇತ್ತು. ನಂತರ ಬೆಂಗಳೂರು ರೇಂಜ್ ಐಜಿ ಆಗಿರುವಾಗ ಯಾರೋ ‘ದಂಡುಪಾಳ್ಯ’ ಸಿನಿಮಾ ಮಾಡಿ ಅದನ್ನು ನೋಡಲು ಆಹ್ವಾನಿಸಿದ್ದರು. ನಾನು ತಂಡವನ್ನು ಕರೆದುಕೊಂಡು ಹೋಗಿದ್ದೆ. ಸಿನಿಮಾ ನೋಡುವಾಗಲೇ ದೊಡ್ಡಬಳ್ಳಾಪುರದಲ್ಲಿ ಯಾರೋ ಇಬ್ಬರು ‘ದಂಡುಪಾಳ್ಯ’ ಸಿನಿಮಾದಲ್ಲಿ ಕೊಲೆ ಮಾಡುವ ರೀತಿಯಲ್ಲಿಯೇ ಕೊಲೆ ಮಾಡಿದ್ದಾರೆ ಎಂದರು” ಎಂದು ನೆನಪು ಮಾಡಿಕೊಂಡರು.
”ರೌಡಿಸಂ ತೋರಿಸುವ ನೀವು ಏನು ಸಂದೇಶ ಕೊಡುತ್ತೀರಿ. ಇನ್ನಷ್ಟು ರೌಡಿಗಳನ್ನೇ ಸೃಷ್ಟಿಸುತ್ತೀರಿ. ಸಾಧನೆಗಳನ್ನು ತೋರಿಸಿ. ಎಷ್ಟು ಜನ ಬಡ ಕುಟುಂಬದಿಂದ ಬಂದು ಸಾಧಕರಾಗಿದ್ದಾರೆ. ವೈದ್ಯರಾಗಿದ್ದಾರೆ, ಪೊಲೀಸರಾಗಿದ್ದಾರೆ, ಸಮಾಜದಲ್ಲಿ ಬದಲಾವಣೆ ತಂದಿದ್ದಾರೆ. ಅಂಥಹುದ್ದನ್ನು ತೋರಿಸಿ ಅದು ಬಿಟ್ಟು ರೌಡಿಸಂ ತೋರಿಸಿ, ಸಮಾಜದಲ್ಲಿ ಕ್ರೌರ್ಯ ಹುಟ್ಟು ಹಾಕುತ್ತಿದ್ದೀರಲ್ಲ” ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.




