ಶಿರಸಿ : ಹಸಿ ಅಡಿಕೆ ಕಳ್ಳತನ ಮಾಡಿದ್ದ ನಿವೃತ್ತ ಎಎಸ್ಐ ಬಂಧನ

ಕಾರವಾರ : ಕಳೆದ ಒಂದು ವಾರಗಳ ಹಿಂದೆ ಶಿರಸಿ ತಾಲೂಕಿನ ಚಿಪಗಿ ಬಳಿ ತೋಟದಲ್ಲಿದ್ದ ಹಸಿ ಅಡಿಕೆಯನ್ನು ಕದ್ದು ಮಾರಲು ಪ್ರಯತ್ನಿಸುತ್ತಿದ್ದ ನಿವೃತ್ತ ಎ.ಎಸ್.ಐ. ಓರ್ವನನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ರಾಮಚಂದ್ರ ದೇವು ನಾಯ್ಕ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.ಈತ ಕಳೆದ ಒಂದು ವಾರಗಳ ಹಿಂದೆ ಚಿಪಗಿಯ ತನ್ನ ಜಮೀನಿನ ಪಕ್ಕದಲ್ಲಿದ್ದ ಮಹಾಬಲೇಶ್ವರ ಭಟ್ ಎಂಬುವವರ ತೋಟದಲ್ಲಿರುವ ಅಡಿಕೆಯನ್ನು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿದ್ದ. ಈ ಕುರಿತು ಮಹಾಬಲೇಶ್ವರ ಭಟ್ಟ ಅವರು ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.
ಡಿ.ವೈ.ಎಸ್.ಪಿ. ರವಿ ನಾಯ್ಕ ಹಾಗೂ ಸಿ.ಪಿ.ಐ.ರಾಮಚಂದ್ರ ನಾಯಕ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ.ಶ್ಯಾಮ ಪಾವಸ್ಕರ ಅವರು ಆರೋಪಿ ಆರ್.ಡಿ. ನಾಯ್ಕ ಎಂಬಾತನನ್ನು ಹಸಿ ಅಡಿಕೆಯನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ಶಿರಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಸುಮಾರು 30 ಸಾವಿರ ರೂ.ಗಳ ಹಸಿ ಅಡಿಕೆ ಕಳ್ಳತನದ ಆರೋಪ ಇವರ ಮೇಲಿದೆ. ಆರೋಪಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.




