ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ಸಚಿವ ನಾರಾಯಣಗೌಡ

ಶಿವಮೊಗ್ಗ: ರೇಷ್ಮೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಮಾರುಕಟ್ಟೆಗೆ ತೆರಳುವ ರೈತರು ಪೊಲೀಸರು ಮತ್ತು ದಲ್ಲಾಳಿಗಳಿಂದ ಬೇಸತ್ತಿದ್ದು, ಅವರಿಗೆ ತೊಂದರೆ ಆಗದಂತೆ ವಿಶೇಷ ಗುರುತಿನ ಚೀಟಿ ನೀಡುವುದಾಗಿ ರೇಷ್ಮೆ ಸಚಿವ ಡಾ.ನಾರಾಯಣಗೌಡ ಹೇಳಿದರು.
ಕಾಚಿನಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರ ಜೊತೆ ಸಚಿವರು ಸಂವಾದ ನಡೆಸಿದ ಅವರು, ರೇಷ್ಮೆ ಗಿಡಗಳಿಗೆ ತ್ರಿಪ್ಸ್ ಆ್ಯಂಡ್ ಮೈಟ್ಸ್ ಎನ್ನುವ ಎಲೆ ತಿನ್ನುವ ಕೀಟದ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಹೇಗೆ ತಡೆಗಟ್ಟುವುದು ಮತ್ತು ಹೆಚ್ಚಿನ ಇಳುವರಿ ಕುರಿತು ಮಾಹಿತಿ ನೀಡಲು ವಿಜ್ಞಾನಿಗಳನ್ನು ಕರೆಸಿ ರೈತರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಚಿವರು ರೇಷ್ಮೆ ಹೊಲಕ್ಕೆ ರೈತರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಉಚಿತವಾಗಿ ನುವಾನ್ ಮತ್ತು ರೋಗಾರ್ ಎನ್ನುವ ಔಷಧವನ್ನು ಸಿಂಪಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಈ ವೇಳೆ ಅತ್ಯುತ್ತಮ ರೇಷ್ಮೆ ಬೆಳೆಗಾರರಿಗೆ ಪ್ರಶಸ್ತಿ ನೀಡುವುದಾಗಿ ತಿಳಿಸಿದರು.
ರೈತರು ಶ್ರಮ ಜೀವಿಗಳು. ಅವರೊಂದಿಗೆ ಅಧಿಕಾರಿಗಳು ಗೌರವದಿಂದ ನಡೆದುಕೊಳ್ಳಬೇಕು. ರೈತರನ್ನು ಅಧಿಕಾರಿಗಳು ಪ್ರೀತಿಯಿಂದ ನಡೆಸಿಕೊಳ್ಳಬೇಕು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ರೇಷ್ಮೆಗೆ ಉತ್ತಮ ದರ ಸಿಗುತ್ತಿದೆ. ವಿಮಾನ ನಿಲ್ದಾಣಗಳಲ್ಲೂ ರೇಷ್ಮೆ ಉತ್ಪನ್ನ ಮಾರಾಟ ಮಳಿಗೆ ಮಾಡುತ್ತೇವೆ. ರೈತರಿಗೆ ನಷ್ಟವಾಗದಂತೆ ತಡೆಯಲು ಹೈಟೆಕ್ ಮಾರುಕಟ್ಟೆ ಕೂಡ ಮಾಡುತ್ತಿದ್ದೇವೆ. ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡುತ್ತೇವೆ ಎಂದರು. ಸುಮಾರು ಮುಕ್ಕಾಲುಗಂಟೆಗಳ ಕಾಲ ರೈತರೊಂದಿಗೆ ನಿಂತುಕೊಂಡೇ ಸಚಿವರು ಸಂವಾದ ನಡೆಸಿದರು. ರೇಷ್ಮೆ ಬೆಳೆಗಾರರ ಸಮಸ್ಯೆ ಬಗ್ಗೆ ಅರಿವಿದೆ. ಈಗ ದರ ಏರಿಕೆ ಆಗಿದೆ. ರೇಷ್ಮೆ ಬೆಳೆಗಾರರೊಂದಿಗೆ ನಾನು ಸದಾ ಇರುತ್ತೇನೆ. ಯಾವುದೇ ಸಂದರ್ಭಲ್ಲೂ ರೈತರ ಜೊತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ರೈತರೊಂದಿಗೆ ಊಟ ಮಾಡಿದ ಸಚಿವರು:
ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ನಡೆಸಿದ ಸಚಿವರು, ಬಳಿಕ ರೈತರ ಮನೆಗೆ ತೆರಳಿ ಅವರೊಂದಿಗೆ ಊಟ ಸವಿದರು. ಸಚಿವರು ತಮ್ಮ ಊರಿಗೆ ಬಂದು ತಮ್ಮೊಂದಿಗೇ ಕುಳಿತು ಊಟ ಮಾಡಿದ್ದಕ್ಕಾಗಿ ರೈತರು ಅಭಿನಂದನೆ ಸಲ್ಲಿಸಿದರು.




