ಉಡುಪಿ
ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದಲ್ಲಿ ವೈಭವದ ಅನಂತ ವ್ರತ

ಉಡುಪಿ: ಇಂದು ಅನಂತ ಚತುರ್ದಶಿ. ಕರಾವಳಿ ಭಾಗದಲ್ಲಿ ಈ ದಿನವನ್ನು ನೋಂಪು ಎಂದು ಆಚರಿಸುತ್ತಾರೆ. ಉಡುಪಿಯ ಪುತ್ತಿಗೆ ಮಠದ ಆಡಳಿತಕ್ಕೆ ಒಳಪಟ್ಟ ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದಲ್ಲಿ ವೈಭವದಿಂದ ಅನಂತ ವೃತ ಆಚರಿಸಲಾಯಿತು.
ಅನಂತ ವೃತದ ದಿನವೇ ಈ ಭಾಗದಲ್ಲಿ ಭತ್ತದ ತೆನೆಯನ್ನು ತೋರಣ ಕಟ್ಟುವ ಸಂಪ್ರದಾಯ ಇದೆ. ಇಂದು ಲಕ್ಷ್ಮಿ ಅನಂತಾಸನ ದೇವರಿಗೆ ಪಂಚಾಮೃತ ಅಭಿಷೇಕ ಅಲಂಕಾರ ಪೂಜೆ ಸೇರಿದಂತೆ ವಿವಿಧ ಆರಾಧನೆಗಳು ನಡೆಯಿತು. ಅನಂತ ಕದಳಿ ಸಮರ್ಪಣ ಸೇವೆಯನ್ನು ನಡೆಸಲಾಯಿತು. ಪವಿತ್ರ ದಾರ ತೋಳಿಗೆ ಕಟ್ಟುವ ಮೂಲಕ ಭಕ್ತರು ವೃತಾಚರಣೆ ಯಲ್ಲಿ ಪಾಲ್ಗೊಂಡರು. ನೋಂಪು ಪ್ರಯುಕ್ತ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಇದಕ್ಕೂ ಮುನ್ನ ಪಲ್ಲಪೂಜೆ ಆಕರ್ಷಣೆಗೆ ಪಾತ್ರವಾಯಿತು. ದೇವರ ಉತ್ಸವಮೂರ್ತಿಯನ್ನು ಹೊತ್ತು ಅನ್ನದ ರಾಶಿಯ ಮುಂದೆ ಇಟ್ಟು ಪೂಜೆ ನಡೆಸಲಾಯಿತು. ನೂರಾರು ಭಕ್ತರು ದೇವರ ದರ್ಶನ ಮಾಡಿದರು.




