ಕೊಡಗುಜಿಲ್ಲಾ ಸುದ್ದಿ
ಹಾಡಹಗಲೇ ಹುಲಿ ಪ್ರತ್ಯಕ್ಷ : ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಒತ್ತಾಯ

ಕೊಡಗು : ಜಿಲ್ಲೆಯ ಸಿದ್ದಾಪುರದ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಬೆಳೆಗಾರ ಜೋಸ್ ಕೊರಿಯನ್ ಅವರ ತೋಟದ ಬಳಿ ಹಾಡ ಹಗಲೇ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಆತಂಕ ಸೃಷ್ಟಿಸಿದೆ.
ಇಂದು ತೋಟದ ಬಳಿಯ ಆನೆ ಕಂದಕದ ಮಣ್ಣಿನ ರಾಶಿಯ ಮೇಲೆ ಹುಲಿಯೊಂದು ಮಲಗಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅಲ್ಲದೆ ದೂರದಿಂದಲೇ ಕ್ಯಾಮರಾಗಳಲ್ಲಿ ಫೋಟೋ ಕ್ಲಿಕ್ಕಿಸುವ ಪ್ರಯತ್ನ ಮಾಡಿದ್ದು ಹುಲಿ ಸೆರೆಯಾಗಿದೆ.
ಕಾಡಾನೆಗಳಂತೆ ಹುಲಿ ಕೂಡ ಹಗಲು ಹೊತ್ತಿನಲ್ಲೇ ರಾಜಾರೋಷವಾಗಿ ತಿರುಗಾಡುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ತೋಟದ ಕೆಲಸಗಳಿಗೆ ಕಾರ್ಮಿಕರು ತೋಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಅನಾಹುತಗಳು ಸಂಭವಿಸುವ ಮೊದಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೇಯಲು ಬಿಟ್ಟ ಹಸುಗಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹುಲಿ ಹಸುಗಳನ್ನು ಭಕ್ಷಿಸುತ್ತಿರಬಹುದು ಎಂದು
ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.




