ಒಂಟಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಬಂಗಾರ ಮತ್ತು ನಗದು ದೋಚಿ ಪರಾರಿ

ಕಾರವಾರ: ಒಂಟಿ ಮಹಿಳೆಯನ್ನ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ನಗದು ಬಂಗಾರ ದೋಚಿ ಪರಾರಿಯಾಗಿದ್ದಾರೆ. ನೀರು ಕುಡಿಯುವ ನೆಪದಲ್ಲಿ ಬಂದ ಆಗಂತುಕ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೈಗೆ ಸಿಕ್ಕ ಒಡವೆ, ಹಣದ ಜೊತೆ ಎಸ್ಕೇಪ್ ಆಗಿದ್ದಾನೆ.
ಮನೆಯಲ್ಲಿ ಮಹಿಳೆಯರು ಒಂಟಿಯಾಗಿ ಇರುವುದನ್ನ ತಿಳಿದು ಅದೆಷ್ಟೋ ಕಡೆ ಹಲ್ಲೆ ಮಾಡಿ ಚಿನ್ನಭರಣ ದೊಚ್ಚಿರೋದು ಸುದ್ದಿಯಾಗಿದೆ. ಇದೀಗ ಅಂಥದ್ದೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗೀತಾ ಯಲ್ಲಾಪುರ ಎಂಬುವವರು ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದರು. ಮನೆಯಲ್ಲಿ ರಾತ್ರಿ ಮಹಿಳೆ ಒಬ್ಬರೇ ಇದ್ದಾರೆ ಎನ್ನುವುದನ್ನು ಖಚಿತ ಪಡಿಸಿಕೊಂಡು ಮನೆಗೆ ಲಗ್ನ ಪತ್ರಿಕೆ ಕೊಡುವ ನೆಪದಲ್ಲಿ ವಂಚಕ ತೆರಳಿದ್ದಾನೆ. ಬಳಿಕ ಮಗನ ಸ್ನೇಹಿತ ಎಂದು ಹೇಳಿ ಮಹಿಳೆಯ ಬಳಿ ಕುಡಿಯಲು ನೀರು ಕೇಳಿದ್ದಾನೆ. ಮಹಿಳೆಯ ಬಳಿ ನೀರು ಕೇಳಿ ಕುಡಿದ ಆರೋಪಿ ಮಹಿಳೆಯ ಮೃತ ಮಗನ ಪೋಟೋ ಹತ್ತಿರ ಬಂದು ಕಣ್ಣೀರು ಹಾಕುವ ನಾಟಕವಾಡಿದ್ದಾನೆ. ಈ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಏಕಾಏಕಿ ಹಲ್ಲೆ ಮಾಡಿ ಸುಮಾರು 1 ಲಕ್ಷ ರೂ.ಬೆಲೆ ಬಾಳುವ ಬಂಗಾರ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದಾನೆ.
ಮಹಿಳೆಯ ಕೊರಳಿನಲ್ಲಿದ್ದ ಸುಮಾರು 70 ಸಾವಿರ ರೂ.ಬೆಲೆ ಬಾಳುವ ಸರ,20 ಸಾವಿರ ರೂ.ಬೆಲೆ ಬಾಳುವ 2 ಉಂಗುರ ಹಾಗೂ ನಗದು 10 ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾನೆ.ಘಟನೆ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




