ಹಾಲ್ ಟಿಕೆಟ್ಗಾಗಿ ಶಾಲೆಯ ಆವರಣದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಧರಣಿ

ಬಾಗಲಕೋಟೆ: ಎಸ್ಎಸ್ಎಲ್ಸಿ ಹಾಲ್ ಟಿಕೆಟ್ ಗಾಗಿ ವಿದ್ಯಾರ್ಥಿ ಹಾಗೂ ಕುಟುಂಬಸ್ಥರು ಶಾಲೆಯ ಆವರಣದಲ್ಲಿಯೇ ಧರಣಿ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಮೂಸಾ ಅಕ್ರೂಟ ಹಾಗೂ ಮೋಸಿನ ಮೋಮಿನ ಎಂಬ ಇಬ್ಬರು ವಿದ್ಯಾರ್ಥಿಗಳೇ ಪ್ರತಿಭಟನೆ ಕೂತವರಾಗಿದ್ದು, ಈ ವಿದ್ಯಾರ್ಥಿಗಳು ತಮ್ಮ ಕುಟುಂಬಸ್ಥರೊಂದಿಗೆ ಹಾಲ್ ಟಿಕೆಟ್ ಗಾಗಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸಿದ್ದಾರೆ.
ಈ ಇಬ್ಬರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಿಲ್ಲ. ಆದರೆ, ಈ ವಿದ್ಯಾರ್ಥಿಗಳು ಫೋಟೋ ಕೊಟ್ಟಿಲ್ಲ, ಈ ಬಗ್ಗೆ ಪಾಲಕರಿಗೆ ಕೊನೆಗಳಿಗೆ ವರೆಗೂ ಹೇಳಿದ್ರೂ, ಹಾಲ್ ಟಿಕೆಟ್ ತಂದು ಕೊಟ್ಟಿಲ್ಲ ಅಂತ ಶಾಲೆ ಮುಖ್ಯಸ್ಥರು ಹೇಳ್ತಿದ್ದಾರೆ. ಆ ಮಕ್ಕಳ ಕುಟುಂಬಸ್ಥರಿಗೆ ಪರೀಕ್ಷೆ ಬಗ್ಗೆ ಆಸಕ್ತಿ ಇರಲಿಕ್ಕಿಲ್ಲ ಅಂತ ನಾವು ಸುಮ್ಮನಾಗಿದ್ದೇವು ಅಂತಾ ಶಾಲೆಯ ಮುಖ್ಯಶಿಕ್ಷಕ ಡೆಂಗ್ರೆ ಅವರು ಹೇಳುತ್ತಿದ್ದಾರೆ. ಅಲ್ಲದೇ ಉಳಿದ ಎಲ್ಲ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಬಂದಿವೆ, ಇದ್ರಲ್ಲಿ ನಮ್ಮ ತಪ್ಪೇನು ಇಲ್ಲ ಎಂದು ಶಾಲಾ ಮುಖ್ಯಶಿಕ್ಷಕ ಡೆಂಗ್ರೆ ಹೇಳ್ತಿದ್ದಾರೆ.
ಇತ್ತ ಹೆಡ್ ಮಾಸ್ತರ್ ಹೇಳಿಕೆ ಅಲ್ಲಗಳೆಯುವ ವಿದ್ಯಾರ್ಥಿಗಳ ಪಾಲಕರು, ಎಲ್ಲವನ್ನು ಕೊಟ್ಟಿದ್ದೇವೆ, ಶಾಲೆಯ ಸಿಬ್ಬಂದಿಗಳ ತಪ್ಪಿನಿಂದ ಹಾಲ್ ಟಿಕೆಟ್ ಬಂದಿಲ್ಲ. ಇದಕ್ಕೆ ಶಾಲೆಯ ಮುಖ್ಯಸ್ಥರೇ ಹೊಣೆ. ನಮ್ಮ ಮಕ್ಕಳಿಗೆ ನ್ಯಾಯ ಸಿಗೋವರೆಗೂ ಇಲ್ಲಿಂದ ಹೋಗಲ್ಲ ಎಂದು ಪಟ್ಟುಹಿಡಿದು ಧರಣಿ ಕೂತಿದ್ದಾರೆ. ಪರೀಕ್ಷೆಯಲ್ಲಿ ಫೇಲಾದ್ರೂ ಚಿಂತೆ ಇಲ್ಲ, ಪರೀಕ್ಷೆಗೆ ಕೂಡಲು ಅವಕಾಶ ಕೊಡಲೇಬೇಕು, ಇಲ್ಲವಾದಲ್ಲಿ ನಾವು ಪ್ರತಿಭಟನೆ ಬಿಡಲ್ಲ ಎಂದು ಪಾಲಕರು ಎಚ್ಚರಿಕೆ ನೀಡುತ್ತಿದ್ದಾರೆ.
ಶಾಲೆಯವರು ಹಾಗೂ ಹಾಗೂ ಪೋಷಕರ ವಿಭಿನ್ನ ಹೇಳಿಕೆಗಳಿಂದ ಪರೀಕ್ಷಾ ವಿದ್ಯಾರ್ಥಿಗಳ ಭವಿಷ್ಯ ಗೊಂದಲದಲ್ಲಿದೆ. ಕಳೆದ ನಾಲ್ಕು ದಿನಗಳಿಂದ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿ ಹಾಗೂ ಅವರ ಕುಟುಂಬ ಧರಣಿ ಕೂತಿದೆ. ಇಬ್ಬರು ವಿದ್ಯಾರ್ಥಿಗಳ ಜೊತೆ ಅಜ್ಜಿ, ಮಾವ ಪ್ರತಿಭಟನೆಗೆ ಕೂತಿದ್ದಾರೆ.
ಇನ್ನು ಪರೀಕ್ಷೆಗೆ ಇನ್ನು ಎರಡೇ ದಿನ ಬಾಕಿ ಇರುವಾಗಲೇ ಇಂತಹ ಘಟನೆ ನಡೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಲೆಯಲ್ಲಿ 150 ವಿದ್ಯಾರ್ಥಿಗಳು ಇದ್ದು, ಇಬ್ಬರಿಗೆ ಹಾಲ್ ಟಿಕೆಟ್ ಇಲ್ಲವಾಗಿದೆ.
