ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಸಿಎಂ ಆಗೋ ಭ್ರಮೆಯಲ್ಲಿದ್ದಾರೆ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆ ಶಾಸಕರು ಬರುತ್ತಾರೆ, ಈ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಹುಳ ಬಿಡುವ ಕೆಲಸ ಮಾಡುತ್ತಿದ್ದಾರೆ. ಅವರು ಮುಂದೆ ಸಿಎಂ ಆಗಬೇಕೆಂಬ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ನಗರದ ಕೇಶ್ವಾಪುರಲ್ಲಿ ಕಾಮಗಾರಿ ಪೂರ್ಣಗೊಂಡ ರಸ್ತೆ ಉದ್ಘಾಟನೆಗೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ನಲ್ಲಿ ಕಿತ್ತಾಟ ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಯಾರೂ ಹೋಗುವುದಕ್ಕೆ ತಯಾರಿಲ್ಲ. ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ನವರು ಇಂತಹ ಗಿಮಿಕ್ ಶುರು ಮಾಡುತ್ತಾರೆ. ಆ ತರ ಯಾರಾದರೂ ಸಂಪರ್ಕದಲ್ಲಿದ್ದರೆ ಅವರ ಹೆಸರುಗಳನ್ನ ಬಹಿರಂಗಪಡಿಸಲಿ ಎಂದರು.
ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವವನ್ನು ಇಡೀ ದೇಶದಲ್ಲಿಯೇ ಕಳೆದುಕೊಳ್ಳುತ್ತಿದೆ. ಜೊತೆಗೆ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಲ್ಲೇ ಹೋಗುತ್ತಿದೆ. ಆದರೆ ಭಾರತೀಯ ಜನತಾ ಪಕ್ಷವು ದೇಶ ವ್ಯಾಪಿ ಬಲಗೊಳ್ಳುತ್ತಾ ಸಾಗಿದೆ. ನಮ್ಮ ಪಕ್ಷದ ಶಕ್ತಿ ಹೆಚ್ಚಾಗುತ್ತಿದೆ. ಪ್ರಸ್ತುತ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಈಗ ಘೋಷಣೆ ಆಗಿದೆ. ಚುನಾವಣೆಯ ಬಳಿಕ ಕಾಂಗ್ರೆಸ್ ಯಾವ ಮಟ್ಟದಲ್ಲಿ ಇದೆ ಅನ್ನುವುದು ಎಲ್ಲರಿಗೂ ತಿಳಿಯಲಿದೆ ಎಂದು ಕಿಡಿಕಾರಿದರು.
ಡಿಕೆಶಿ ಪ್ಲಾನ್ ಗೆ ರಮೇಶ ಜಾರಕಿಹೊಳಿಯಿಂದ ರೀವರ್ಸ್ ಆಪರೇಶನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ರೀತಿಯ ಯಾವುದೇ ಬೆಳವಣಿಗೆ ನಮ್ಮಲ್ಲಿ ನಡೆದಿಲ್ಲ. ರಾಜ್ಯಾಧ್ಯಕ್ಷರಾಗಲಿ ಸಿಎಂ ಆಗಲಿ ಈ ಬಗ್ಗೆ ಏನೂ ಹೇಳಿಲ್ಲ ಎಂದರು.
