ಅಂಗಡಿಗೆ ಬೆಂಕಿ ಇಟ್ಟು ಹಲ್ಲೆ ಮಾಡಿದ ಸಂಘಟಕರು: ನೈತಿಕ ಪೊಲೀಸಗಿರಿ ತಡವಾಗಿ ಬೆಳಕಿಗೆ

ಬೆಳಗಾವಿ: ಕಳೆದ ಒಂದು ತಿಂಗಳಿಂದ ಬೆಳಗಾವಿ ನಗರ ಹಾಗೂ ಜೆಲ್ಲೆಯ ಸುತ್ತಮುತ್ತ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ವರದಿ ಆಗುತ್ತಲೇ ಇವೆ, ಕ್ರಮ ಕೈಗೊಳ್ಳಬೇಕಾದ ವ್ಯಕ್ತಿಗಳು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತೆ ವರ್ತಿಸುತ್ತಿರುವುದು ಕೂಡ ಕಂಡು ಬರುತ್ತಿದೆ.
ಬೆಳಗಾವಿ ನಗರದ ಹೊರವಲಯದ ಯಮನಾಪುರ ಗ್ರಾಮದಲ್ಲಿ ದಸರಾ ಹಬ್ಬದ ಮೊದಲ ದಿನ ದೇವಸ್ಥಾನದ ಕಾರ್ಯಕ್ರಮ ನಡೆಯುತ್ತಿತ್ತು, ರಾಜಕೀಯ ಗಣ್ಯರು ಸೇರಿದಂತೆ ಗ್ರಾಮಸ್ಥರು ಎಲ್ಲರೂ ಸೇರಿ ಹಬ್ಬ ಮಾಡುವಾಗ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಚಿಕನ್ ಅಂಗಡಿ ಓಪನ್ ಇದೆ ಎನ್ನುವ ಕಾರಣಕ್ಕೆ ಗಲಾಟೆ ಶುರುವಾಗಿ, ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗ ಹಾಗೂ ಮಾಲೀಕ ಹಸನ್ ಸಾಬ್ ಮೇಲೆ ಹಲ್ಲೆ ಮಾಡಿ ಅಂಗಡಿಯ ಬ್ಯಾನರ್ ಹರಿದು ಬೆಂಕಿ ಹಚ್ಚಿ ಹಲ್ಲೆ ಮಾಡಲಾಗಿದೆ.
ತಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗಿದೆ, ಪ್ರಸಾದ ಹಂಚುವ ಸಮಯದಲ್ಲಿ ಇವರು ಮಾಂಸ ಮಾರಾಟ ಮಾಡುತ್ತಿದ್ದಾರೆ, ನಾವು ಮುಂಚಿತವಾಗಿ ಇವರಿಗೆ ಅಂಗಡಿ ಓಪನ್ ಮಾಡದಂತೆ ತಿಳಿಸಿದ್ದೇವು, ಆದ್ರೆ ಇವರು ಉಲ್ಲಂಘನೆ ಮಾಡಿರುವುದರಿಂದ ಇವರಿಗೆ ಬುದ್ದಿ ಕಲಿಸುತ್ತಿದ್ದೇವೆ, ಸರ್ಕಾರ ಕೂಡ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಿಡಿಯೋ ಮಾಡಿ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ ಅಲ್ಲದೆ ಅಂಗಡಿಯನ್ನ ದ್ವಂಸ ಮಾಡಿ ಬ್ಯಾನರ್ ಹರಿದು ಬೆಂಕಿಯನ್ನು ಕೂಡ ಹಚ್ಚಲಾಗಿದೆ.
ಈ ಬಗ್ಗೆ ಹಸನ್ ಸಾಬ್ ಹೇಳಿಕೆ ಪಡೆದಾಗ ನಮ್ಮ ಅಂಗಡಿ ಹೊರತು ಪಡಿಸಿ ಇತರೆ ಮೂರು ಮರಾಠಿ ಜನರ ಅಂಗಡಿಗಳು ಕೂಡ ಓಪನ್ ಇದ್ದವು ಅವುಗಳನ್ನ ಬಿಟ್ಟು ನಮ್ಮನ್ನ ಟಾರ್ಗೆಟ್ ಮಾಡಿದ್ದಾರೆ, ಅಲ್ಲದೆ ಘಟನೆ ನಂತರ ನಾನು ಸಾಕಷ್ಟು ಬಾರಿ ಕ್ಷಮಾಪಣೆ ಕೇಳಿದ್ದೇನೆ ಆದ್ರೆ ಉದ್ದೇಶಪೂರ್ವಕವಾಗಿ ನನ್ನ ಅಂಗಡಿಯನ್ನ ಬಂದ್ ಮಾಡಿಸಿ ನನ್ನನ್ನು ಊರಿನಿಂದ ಓಡಿಸಬೇಕು ಅಂತ ಕೆಲವರು ಬೆದರಿಕೆ ಹಾಕುತ್ತಿದ್ದಾರೆ, ನಾನಿರುವ ಮನೆ ಹಾಗೂ ಅಂಗಡಿ ಮಾಲೀಕರಿಗೆ ನಮ್ಮನ್ನ ಬಿಡಿಸುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಘಟನೆ ನಡೆದ ಮೇಲೆ ಸ್ಥಳೀಯ ಮಾಳ ಮಾರುತಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾಗ ಪೊಲೀಸರು ದೂರು ಸ್ವೀಕರಿಸಿಲ್ಲಾ, ಹಲ್ಲೆ ಮಾಡಿದ ಯುವಕರನ್ನ ಕರೆಸಿ ರಾಜಿ ಮಾಡಿಸಿ ಕಳುಹಿಸಿದ್ದಾರೆ, ಪೊಲೀಸರು ರಾಜಿ ಮಾಡಿದ ನಂತರವೂ ಲಿಂಗಪ್ಪ ಎನ್ನುವ ವ್ಯಕ್ತಿ ನಮ್ಮನ್ನು ಬೆದರಿಸುತ್ತಿದ್ದು ಬುರ್ಕಾ ಎಳೆದು ರಸ್ತೆಯಲ್ಲಿ ಅವಮಾನ ಮಾಡಿದ್ದಾನೆ. ಅಲ್ಲದೆ 1 ಲಕ್ಷ ಹಣವನ್ನು ದಂಡವಾಗಿ ನೀಡಬೇಕು ಇಲ್ಲವಾದ್ರೆ ನಿಮ್ಮನ್ನು ಬಿಡುವುದಿಲ್ಲಾ ಎಂದು ಧಮ್ಕಿ ಹಾಕುತ್ತಿದ್ದಾನೆ ಎಂದು ಹಸನ್ ಸಾಬ್ ನ ಪತ್ನಿ ಆರೋಪಿಸಿದ್ದಾಳೆ.
ಇನ್ನು ಮಾಳ ಮಾರುತಿ ಪೊಲೀಸರು ರಾಜಿ ಸಂಧಾನ ಮಾಡಿರುವುದನ್ನ ಸಮರ್ಥಿಸಿಕೊಂಡಿದ್ದು ಕೇಸ್ ದಾಖಲಿಸಿದೆ ಮುಂದೆ ಇಂತಹದೇ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ ಹೀಗಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ಮಾಡಿಸಲಾಗಿದೆ ಎಂದಿದ್ದಾರೆ.
ಸದ್ಯ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹಾಗೂ ನೈತಿಕ ಪೊಲೀಸಗಿರಿಯನ್ನು ನಡೆಸಿರುವ ಸಂದೀಪ್, ಕಪಿಲ್, ಮಯೂರ್, ಹರೀಶ್, ಲಿಂಗಪ್ಪ, ರಮೇಶ್, ಶಂಕರ್ ಹಾಗೂ ಇತರೆ ಜನರ ಮೇಲೆ ಪೊಲೀಸರು ಕ್ರಮ ಕೈಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ, ಇಂದು ಬೆಂಕಿ ಹಚ್ಚಿರುವ ಈ ದಂಗೆಕೋರರು ನಾಳೆ ಪ್ರಾಣಹಾನಿ ಮಾಡಿದರೆ ಹೊಣೆ ಯಾರು ಎನ್ನುವುದಕ್ಕೂ ಇಲ್ಲಿ ಉತ್ತರವಿಲ್ಲ.
ಇನ್ನು ವಿಡಿಯೋ ಮಾಡಿ ಹಾಕಿದ್ದ ಯುವಕರು ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವುಗಳನ್ನ ಡಿಲೀಟ್ ಮಾಡುತ್ತಿದ್ದಾರೆ, ಭಯದ ವಾತಾವರಣದಲ್ಲಿ ಹಸನ್ ಸಾಬ್ ಕುಟುಂಬ ಇರುವ ಒಬ್ಬ ಮಗನನ್ನು ಕೂಡ ಸಂಬಂದಿಕರ ಮನೆಯಲ್ಲಿ ಬಿಟ್ಟು ಜೀವನ ಸಾಗಿಸುತ್ತಿದ್ದು ರಕ್ಷಣೆ ಬೇಕು ಪೊಲೀಸರಲ್ಲಿ ಕೇಳಿ ಕೊಳ್ಳುತ್ತಿದ್ದಾರೆ.




