ಚಿಕ್ಕಮಗಳೂರುಜಿಲ್ಲಾ ಸುದ್ದಿ
ಅಂಗಾಗ ದಾನ ಮಾಡಿ ಸಾರ್ಥಕತೆ ಮೆರೆದ ನರ್ಸ್

ಚಿಕ್ಕಮಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿ ಅಂಗಾಗ ದಾನ ಮಾಡಿ ಸಾರ್ಥಕತೆ ತೋರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಕೆರೆಮನೆಯಲ್ಲಿ ಬೆಳಕಿಗೆ ಬಂದಿದೆ.
ಗಾನವಿಗೆ ಬ್ರೈನ್ ಡೆಡ್ ಆಗಿತ್ತು. ಚಿಕಿತ್ಸೆ ನೀಡಿದರೂ ಫಲವಾಗಲಿಲ್ಲ. ಹೀಗಾಗಿ ಅಂಗಾಗ ದಾನ ಮಾಡಲು ಯುವತಿಯ ಪೋಷಕರು ನಿರ್ಧಾರ ಮಾಡಿದ್ದಾರೆ. ಆ ಮೂಲಕ ಗಾವವಿ ಸಾವಿನಲ್ಲೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾಳೆ.
ಕೆರೆಮನೆಯ ಕೃಷ್ಣೇಗೌಡ ಹಾಗೂ ಲೀಲಾವತಿ ದಂಪತಿಯ ಎರಡನೇ ಪುತ್ರಿ ಗಾನವಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಫೆ.8ರಂದು ಕೆಲಸ ಮಾಡುವಾಗ ಕುಸಿದುಬಿದ್ದು ಪ್ರಜ್ಞೆತಪ್ಪಿದೆ. ಫೆ.12ರವರೆಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಹೀಗಾಗಿ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದಾರೆ.




