ಜಿಲ್ಲಾ ಸುದ್ದಿಮೈಸೂರು

ಪೆರಿಯಾರ್‌ ಪ್ರಶಸ್ತಿಗೆ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಆಯ್ಕೆ

ಮೈಸೂರು : ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರಿಗೆ 2021ನೇ ಸಾಲಿನ ಪೆರಿಯಾರ್ ಪ್ರಶಸ್ತಿ ಸಂದಿದೆ. ಕರ್ನಾಟಕ ವಿಚಾರವಾದಿಗಳ ವೇದಿಕೆ ಪ್ರತಿ ವರ್ಷ ದ್ರಾವಿಡ ಚಳವಳಿಯ ನೇತಾರ ಇ.ವಿ. ರಾಮಸ್ವಾಮಿ ಪೆರಿಯಾರ್ ಅವರ ಜನ್ಮದಿನದಂದು ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಸೆಪ್ಟೆಂಬರ್ 18 ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಗಾಂಧಿ ಭವನದ ಸಭಾಂಗಣದಲ್ಲಿ ನಡೆಯಲಿದೆ.

ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ ಜನಿಸಿದ ಚಿನ್ನಸ್ವಾಮಿ ಅವರು ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಪ್ರಗತಿಪರ ಚಿಂತಕ, ಲೇಖಕ, ಉಪನ್ಯಾಸಕರಾಗಿ ಕಳೆದ 20 ವರ್ಷಗಳಿಂದ ಸಾಹಿತ್ಯ ವ್ಯವಸಾಯ ನಿರ್ವಹಿಸುತ್ತಿದ್ದಾರೆ.

ಕವಿಯಾಗಿ ಚಿನ್ನಸ್ವಾಮಿಯವರು ಪ್ರಕಟಿಸಿದ ಸಂಕಲನಗಳು ಹಲವಿವೆ. ವೆನಿಜುಲಾ ದೇಶದ ಸ್ಪ್ಯಾನಿಷ್ ಭಾಷೆಗೂ ಇವರ ಕವನಗಳು ಅನುವಾದಗೊಂಡಿವೆ. ಇವರ ಕಾವ್ಯ ಕೃತಿಗಳಿಗೆ ನಾಡಿನ ವಿವಿಧ ಪುರಸ್ಕಾರ, ಬಹುಮಾನಗಳು ಲಭಿಸಿವೆ.

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕೃತಿಗಳ ಪೈಕಿ ಕೆಂಡ ಮಂಡಲ, ಬಹುರೂಪಿ (ನಾಟಕಗಳು), ನೆನಪಿನ ಹಕ್ಕಿಯ ಹಾರಲು ಬಿಟ್ಟು (ಆತ್ಮಕಥೆ),
ಕೊಂಡಿಗಳು ಮತ್ತು ಮುಳ್ಳುಬೇಲಿಗಳು, ಗೋಧೂಳಿ, ಮತ್ತೆ ಮಳೆ ಬರುವ ಮುನ್ನ, ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಚಂದಿರನ ಕಣ್ಣು, ಇಂಗಲಾರದ ಹುಣ್ಣು (ಕವನ ಸಂಕಲನಗಳು), ಮೋಹದ ದೀಪ (ಸಣ್ಣಕಥೆ) ಪ್ರಮುಖವಾದವು.

Spread the love

Related Articles

Leave a Reply

Your email address will not be published. Required fields are marked *

Back to top button