‘ನನ್ನ ಹೆಸ್ರು ಕಿಶೋರ್ ಏಳ್ ಪಾಸ್ ಎಂಟು’ ಮಕ್ಕಳ ಸಿನಿಮಾ ನ.19 ರಂದು ಬಿಡುಗಡೆಗೆ ಸಿದ್ಧತೆ: ಎಂ.ಡಿ.ಪಾರ್ಥಸಾರಥಿ

ಧಾರವಾಡ: ಪಾತಿ ಫಿಲ್ಮ್ ನಿರ್ಮಾಣದ ‘ನನ್ನ ಹೆಸ್ರು ಕಿಶೋರ್ ಏಳ್ ಪಾಸ್ ಎಂಟು’ ಮಕ್ಕಳ ಸಿನಿಮಾ ಇದೇ ನವೆಂಬರ್ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲ ಸಿನಿಪ್ರೆಮಿಗಳು ಚಿತ್ರವನ್ನು ನೋಡಿ ಆರ್ಶೀವಾದ ಮಾಡಬೇಕು ಎಂದು ನಿರ್ಮಾಪಕ ಎಂ.ಡಿ.ಪಾರ್ಥಸಾರಥಿ ಹೇಳಿದರು.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಗುಲಬರ್ಗಾದಲ್ಲಿ ನಡೆದ ಸತ್ಯ ಘಟನೆ ಆಧಾರಿತ ಸಿನಿಮಾ ‘ನನ್ನ ಹೆಸ್ರು ಕಿಶೋರ್ ಏಳ್ ಪಾಸ್ ಎಂಟು’, ಮಕ್ಕಳನ್ನು ಕಳ್ಳತನ ಮಾಡಿ ಅವರಿಂದ ಭಿಕ್ಷಾಟನೆ ಮಾಡಿಸುತ್ತಿದ್ದ ಕುರಿತು ಸುದ್ದಿ ನೋಡಿ ಈ ಸಿನಿಮಾ ಮಾಡಲಾಗಿದೆ. ಈಗಾಗಲೇ 2019-20 ನೇ ಸಾಲಿನ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 130 ಕನ್ನಡ ಚಿತ್ರಗಳಲ್ಲಿ ಆಯ್ಕೆಯಾದ ಏಕೈಕ ಮಕ್ಕಳ ಚಿತ್ರವಾಗಿದೆ. ಎಲ್ಲ ಪೋಷಕರು ಹಾಗೂ ಮಕ್ಕಳು ನೋಡಬೇಕಾದ ಸಿನಿಮಾ ಇದಾಗಿದೆ ಎಂದರು.
ಚಿತ್ರದ ನಿರ್ದೇಶಕ ಭಾರತೀ ಶಂಕರ ಎಂ.ಪಿ ಮಾತನಾಡಿ, ನನ್ನ ಹೆಸ್ರು ಕಿಶೋರ್ ಏಳ್ ಪಾಸ್ ಎಂಟು ಸಿನಿಮಾವನ್ನು ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಹಿರಿಯ ನಟರಾದ ದತ್ತಣ್ಣ, ತಬಲಾ ನಾಣಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡ್ರಾಮಾ ಜ್ಯೂನಿಯರ್ ಖ್ಯಾತಿಯ ಮಹೇಂದ್ರ, ಶಶಿ ಸೇರಿದಂತೆ ಮುಂತಾದ ಮಕ್ಕಳು ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಇಂದಿನ ದಿನಮಾನಗಳಲ್ಲಿ ಮಕ್ಕಳನ್ನು ಕಳ್ಳತನ ಮಾಡಿ, ಅವರ ಮೇಲೆ ದುಷ್ಟ ಶಕ್ತಿಗಳು ಹೇಗೆ ತಮ್ಮ ಬೆಳೆ ಬೆಯಿಸಿಕೊಳ್ಳುತ್ತಿವೆ. ನಂತರ ಮಕ್ಕಳು ಹೇಗೆ ದುಷ್ಟಚಟಕ್ಕೆ ಒಳಗಾಗುತ್ತಾರೆ ಎಂಬುವುದರ ಕುರಿತು ಇದರಲ್ಲಿ ವಿವರಿಸಲಾಗಿದೆ. ಹಾಗಾಗಿ ಎಲ್ಲರೂ ಕುಟುಂಬ ಸಮೇತವಾಗಿ ಬಂದು ಸಿನಿಮಾವನ್ನು ನೋಡಿ ಆರ್ಶೀವಾದ ಮಾಡಬೇಕು ಎಂದು ಕೇಳಿಕೊಂಡರು.




