ಕೋವಿಡ್ ಹಿನ್ನೆಲೆ ಸರಳ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್ ಜಿ ನಂಜಯ್ಯನಮಠ ಪದಗ್ರಹಣ

ಬಾಗಲಕೋಟೆ: ಬಾಗಲಕೋಟೆ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಎಸ್ ಜಿ ನಂಜಯ್ಯನಮಠ ಅವರ ಪದಗ್ರಹಣ ಕಾರ್ಯಕ್ರಮ ಸರಳವಾಗಿ ನಡೆಯುವ ಮೂಲಕ ಅಧಿಕಾರ ಸ್ವೀಕರಿಸಿದರು.
ಬಾಗಲಕೋಟೆ ನವನಗರದಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು. ನಿರ್ಗಮಿತ ಅಧ್ಯಕ್ಷ ಎಂಬಿ ಸೌದಾಗರ ನೂತನ ಅಧ್ಯಕ್ಷ ಎಸ್ ಜಿ ನಂಜಯ್ಯನಮಠ ಅವರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಕಳೆದ ವರ್ಷದ ಹಿಂದೆ ನೂತನ ಅಧ್ಯಕ್ಷರಾಗಿ ಎಸ್ ಜಿ ನಂಜಯ್ಯನಮಠ ಅವರನ್ನು ನೇಮಕ ಮಾಡಿದ್ದರೂ ಅಧಿಕಾರ ಪದಗ್ರಹಣ ನಡೆದಿರಲಿಲ್ಲ. ಇದೀಗ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಪದಗ್ರಹಣ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ಎಸ್ ಜಿ ನಂಜಯ್ಯನಮಠ ಜೋಳಗಿ ಹಿಡಿದು ಹಣ ಸಂಗ್ರಹಿಸಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ಕಟ್ಟಿಸಿ, ಇದೀಗ ಅದೇ ಕಟ್ಟಡದೊಳಗೆ ಅಧಿಕಾರ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ಮಾತನಾಡಿ, ನೂತನ ಜಿಲ್ಲಾ ಅಧ್ಯಕ್ಷ ಎಸ್ ಜಿ ನಂಜಯ್ಯನಮಠ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು.ಇನ್ನೂ ಎಸ್ ಜಿ ನಂಜಯ್ಯನಮಠ ಅವರು ಅಧಿಕಾರ ಸ್ವೀಕರಿಸಿದೇ ಹಗಲಿರುಳು ಶ್ರಮಿಸಿ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿ ಸುಸಜ್ಜಿತವಾಗಿ ಕಟ್ಟಿಸಿದ್ದಾರೆ. ನಂಜಯ್ಯನಮಠ ಕಾರ್ಯವೈಖರಿಗೆ ಶ್ಲಾಘನೀಯ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಸಚಿವೆ ಉಮಾಶ್ರೀ, ಮಾಜಿ ಸಚಿವ ಎಚ್ ವೈ ಮೇಟಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಅಧಿಕಾರ ಸಿಗಲಿದೆ. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ, ಅಧಿಕಾರ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದರು.




