ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ

ರಾಮನಗರ: ಕಳೆದ ಮೂರು ತಿಂಗಳಿಂದ ವೈದ್ಯರಿಲ್ಲದೇ ಗ್ರಾಮೀಣ ಪ್ರದೇಶದ ರೋಗಿಗಳು ಪರದಾಡುತ್ತಿದ್ದಾರೆ. ಇದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ದಿಢೀರ್ ಪ್ರತಿಭಟನೆ ನಡೆಸಿದರು.
ಬೇವೂರು ಗ್ರಾಮದಲ್ಲಿ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಈ ಆಸ್ಪತ್ರೆ 20ಕ್ಕೂ ಹೆಚ್ಚು ಗ್ರಾಮಗಳಿಂದ ನಿತ್ಯ ನೂರಾರು ಮಂದಿ ಚಿಕಿತ್ಸೆ ಪಡೆಯಲು ಕಳೆದ ಮೂರು ತಿಂಗಳಿಂದ ನಿತ್ಯವೂ` ಬಂದು ವಾಪಸ್ಸಾಗುತ್ತಿದ್ದಾರೆ. ಕೆಲವರು ದೂರದ ಚನ್ನಪಟ್ಟಣಕ್ಕೆ ಹೋಗಬೇಕಿದೆ. ಇದರಿಂದ ಬಡವರು ಅದರಲ್ಲೂ ವೃದ್ಧರಿಗೆ ನಿತ್ಯವು ಕಿರಿಕಿರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ. ಶ್ವೇತಾ ತುಂಬ ಚೆನ್ನಾಗಿ ಕೆಲಸ ಮಾಡುತ್ತಾ, ರೋಗಿಗಳ ನೆಚ್ಚಿನ ವೈದ್ಯಯಾಗಿದ್ದರು. ಅವರು ಹೆರಿಗೆಗೆಂದು ಮೂರು ತಿಂಗಳ ಹಿಂದೆ ರಜೆ ಹಾಕಿದ್ದಾರೆ. ಆದರೇ ಇವರ ಜಾಗಕ್ಕೆ ಬದಲಿ ವೈದ್ಯರನ್ನು ನೇಮಕ ಮಾಡುವಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ವಿಫಲರಾಗಿದ್ದಾರೆ.
ಕಾಟಚಾರಕ್ಕೆಂದು ಬದಲಿ ವೈದ್ಯರನ್ನು ಇಲ್ಲಿಗೆ ಹಾಕುತ್ತಾರೆ. ಆದರೇ ಒಮ್ಮೆ ಬಂದವರು ಮತ್ತೇ ಇತ್ತ ಸುಳಿಯುವುದಿಲ್ಲ. ಇದರಿಂದ ಆರೋಗ್ಯ ಕೇಂದ್ರ ಇದ್ದು ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಕೋವಿಡ್ ಸೋಂಕು ದಿನೇ ದಿನೇ ಗ್ರಾಮೀಣ ಪ್ರದೇಶದಲ್ಲಿ ಉಲ್ಭಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೂಡ ಒಬ್ಬ ವೈದ್ಯರನ್ನು ನೇಮಕ ಮಾಡಲು ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಇಂದು ಕೂಡ 200 ಮಂದಿಯಷ್ಟು ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಇವರ ಸ್ಥಿತಿ ಕೇಳೋರ್ಯಾರು, ಇವರ ಜೀವಕ್ಕೆ ಬೇಲೆ ಇಲ್ಲವೇ? ಎಂದು ಪ್ರಶ್ನಿಸಿದರು.
ನಂತರ ತಾಲೂಕು ಆರೋಗ್ಯಾಧಿಕಾರಿ ಟಿ.ಎಂ. ರಾಜು ಸೋಮವಾರದಿಂದ ವೈದ್ಯರನ್ನು ಕಳಿಸುತ್ತೇವೆ ಎಂದು ದೂರವಾಣಿ ಮೂಲಕ ಪ್ರತಿಭಟನಾನಿರತ ಮುಖಂಡರಲ್ಲಿ ಮನವಿ ಮಾಡಿದರು. ಸೋಮವಾರ ವೈದ್ಯರು ಬಾರದಿದ್ದಲ್ಲಿ ಮತ್ತೆ ಹತ್ತಾರು ಗ್ರಾಮಗಳ ಜನರೊಟ್ಟಿಗೆ ಪ್ರಾಥಮಿಕ ಕೇಂದ್ರಕ್ಕೆ ಬೀಗ ಜಡಿಯುವುದಲ್ಲದೇ, ತಮ್ಮ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿ, ಪ್ರತಿಭಟನೆ ಹಿಂಪಡೆದರು.




