ಪ್ರವಾಸಿ ತಾಣ ಕಣ್ವ ಡ್ಯಾಂ ರಸ್ತೆ ಅಧ್ವಾನ; ಪ್ರವಾಸಿಗರಿಗಷ್ಟೇ ಅಲ್ಲ, ಸ್ಥಳೀಯರಿಗೂ ಕಿರಿಕಿರಿ

ರಾಮನಗರ: ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾದ ಚನ್ನಪಟ್ಟಣದ ಕಣ್ವ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಕಣ್ವ-ಕೆಂಗಲ್ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತು ಕುಂಠಿತಗೊಂಡಿದೆ.
ಸೇತುವೆ ಕಿತ್ತು ಹಾಕಿ ಮೂರು ತಿಂಗಳು ಕಳೆದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೇತುವೆ ದುರಸ್ಥಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಈ ಮಾರ್ಗದ ಸಾರ್ವಜನಿಕರ ಜೊತೆಗೆ ಜಲಾಶಯಕ್ಕೆ ಬರುವ ಪ್ರವಾಸಿಗರಿಗೂ ತೀವ್ರ ತೊಂದರೆಯಾಗಿದೆ.
ಈಗ ಕಿತ್ತು ಹಾಕಿರುವ ರಸ್ತೆ ಹಾಳಾಗಿ ವಾಹನ ಸಂಚಾರಕ್ಕೆ ಅವ್ಯವಸ್ಥೆಯಿಂಸ ಕೂಡಿದ್ದು, ದ್ವಿಚಕ್ರ ವಾಹನ ಸೇರಿದಂತೆ ಜನ ತಿರುಗಾಡಲು ಸರಿಯಾದ ರಸ್ತೆ ಇಲ್ಲದೆ ಪರದಾಡುವಂತಾಗಿದೆ. ಪಕ್ಕದಲ್ಲಿ ತಾತ್ಕಲಿಕವಾಗಿ ನಿರ್ಮಿಸಿರುವ ಮಣ್ಣಿನ ರಸ್ತೆ ಜಾರುಬಂಡಿಯಂತಾಗಿದೆ.
ಮುಖ್ಯವಾಗಿ ಗಡಿ ಗ್ರಾಮ ಎಲೆಹೊಸಳ್ಳಿ ಗ್ರಾಮದಿಂದ ದಶವಾರ ಕಣ್ವ ಮಾಕಳಿ ಆರೋಗ್ಯ ಕೇಂದ್ರಗಳಿಗೆ ಸಂಪರ್ಕ ರಸ್ತೆಯಾಗಿದ್ದು, ಕಾಮಗಾರಿ ಕುಂಠಿತಗೊಂಡಿರುವ ಕಾರಣ ಜನರು ತೊಂದರೆ ಅನುಭವಿಸಬೇಕಾಗಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದ ಕಣ್ವ ಜಲಾಶಯದ ಕೋಡಿ ನೀರು ಹರಿಯುವ ಕಾಲುವೆಗೆ ಅಡ್ಡಲಾಗಿದ್ದ ಹಳೆ ಕಿರು ಸೇತುವೆ ಶಿಥಿಲಗೊಂಡ ಕಾರಣ ಕಳೆದ ಮೂರು ತಿಂಗಳ ಹಿಂದೆ ಕಿತ್ತುಹಾಕಿದ್ದು, ಆಗ ಕಾಮಗಾರಿ ಆರಂಭಿಸಿದ್ದರೂ. ಆದರೆ ಮೂರು ತಿಂಗಳಿಂದ ಕಾಮಗಾರಿ ಮಾಡದೇ ಅರ್ಧಕ್ಕೆ ಬಿಟಿದ್ದು, ಈ ಮಾರ್ಗದಲ್ಲಿ ಜನ ಹಾಗೂ ಸರಕು ತುಂಬಿಕೊಂಡು ಬರುವ ವಾಹನಗಳು ರಸ್ತೆಯಲ್ಲಿ ಓಡಾಡಲು ದುಸ್ಥರವಾಗಿದೆ. ವೃದ್ಧರು, ಮಹಿಳೆಯರು, ರೋಗಿಗಳು, ಸಾರ್ವಜನಿಕರು ಮತ್ತು ವಾಹನ ಸಾವರರು ಸಂಚರಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಬಂದಿದೆ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ಥಿಪಡಿಸುವ ಗೋಜಿಗೆ ಹೋಗಿಲ್ಲ. ತುಂತುರು ಮಳೆ ಆರಂಭವಾಗಿದ್ದು, ರಸ್ತೆಯು ಕೆಸರು ಗದೆಯಾಗಿದ್ದು, ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನೂ ರಾತ್ರಿ ವೇಳೆ ಓಡಾಡಲು ಭಯ ಪಡುತ್ತಿದ್ದಾರೆ. ಇನ್ನೂ ಈ ರಸ್ತೆ ದಶವಾರ -ಮಾಕಳಿ ಮಾರ್ಗದ ಮೂಲಕ ತುಮಕುರು -ಕುಣಿಗಲ್ ಉಜ್ಜನಿ-ಹುಲಿಯೂರು ದುರ್ಗ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದ್ದು, ಜತೆಗೆ ಕಣ್ವ-ಕ್ಯಾಸಪುರ ಮಾರ್ಗವಾಗಿ ಮಾಗಡಿ ಮತ್ತು ರಾಮನಗರಕ್ಕೆ ಇದೇ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. ಸೇತುವೆ ನಿಧಾನಗತಿ ಕಾಮಗಾರಿಯಿಂದ ಈ ಮಾರ್ಗದಲ್ಲಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಲಿದ್ದು. ಅಲ್ಲದೇ ಈ ಮಾರ್ಗದಲ್ಲಿ ಪ್ರಯಾಣಿಸುವ ವಾಹನಗಳು, ವಿದ್ಯಾರ್ಥಿಗಳು, ಹಿರಿಯ ನಾಗರೀಕರು ನಿತ್ಯ ಪರದಾಡಬೇಕಾಗುತ್ತದೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಅಧಿಕಾರಿಗಳು ಸೇತುವೆ ಮತ್ತು ಕಾಲುವೆ ಕಾಮಗಾರಿಗೆ ಮುಂದಾಗಿಲ್ಲ. ಸಂಬಂಧಪಟ್ಟವರು ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಬೇಸಾಯಕ್ಕೂ ಕುತ್ತು: ಮುಂಗಾರು ಆರಂಭವಾಗಿದ್ದು, ಕಣ್ಣಕ್ಕೆ ನೀರು ಬಂದರೆ. ಕಣ್ವ ಜಲಾಶಯದಿಂದ ಎಲೆಹೊಸಳ್ಳಿ, ಅಬ್ಬೂರು. ಅಬ್ಬೂರು ದೊಡ್ಡಿ ಮಾರ್ಗವಾಗಿ ಹತ್ತಾರು ಗ್ರಾಮಗಳನ್ನು ಹಾದು ಹೋಗುವ ಈ ಕಾಲುವೆ ನೀರು ಕೆರಗಳಿಗೆ ಹರಿದು ಬರಲಿದ್ದು, ಈ ಭಾಗದಲ್ಲಿ ರೇಷ್ಮೆ, ಭತ್ತ, ತೆಂಗು, ರಾಗಿ, ಮಾವು ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳಯುತ್ತಲಿದ್ದ, ರೈತರು ಬೇಸಾಯ ಮಾಡಲು ತೊಂದರೆಯಾಗಲಿದೆ. ನೂರಾರು ರೈತ ಕುಟುಂಬಗಳ ಸಾವಿರಾರು ಎಕರೆಗಳಲ್ಲಿ ವ್ಯವಸಾಯಕ್ಕೆ ಆಧಾರವಾಗಿದೆ. ಸೇತುವೆ ಕೆಳಗಡೆಯ ಕಾಲುವೆ ಮೂಲಕ ನಿರುಣಿಸುತ್ತಿದ್ದ ನೀರು ಹರಿಯುವುದು ಸ್ಥಗಿತಗೊಳ್ಳಲಿದೆ. ಅಲ್ಲದೇ ಕಾಲುವೆ ಹಾದು ಹೋಗುವ ಗ್ರಾಮಗಳಲ್ಲಿನ ಮಹಿಳೆಯರು ಬಟ್ಟೆ, ಪಾತ್ರೆಗಳು, ಎಮ್ಮೆ-ದನ-ಹಸುಗಳನ್ನು ತೊಳೆಯುವುದು ಮತ್ತು ನೀರು ಕುಡಿಸಲು ಅನುಕೂಲವಾಗುತ್ತಿತ್ತು. ಹೈನುಗಾರಿಕೆಗೂ ಹೆಚ್ಚಿನ ಅನುಕೂಲವಾಗುತ್ತಿತ್ತು.
ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ವಿಷಯ ಗಮನಕ್ಕೆ ತಂದರು ಅಧಿಕಾರಿಗಳು ಗಮನಹರಿಸುತ್ತಿಲ್ಲ ಎನ್ನುವುದು ಈ ಭಾಗದ ರೈತರ ಆರೋಪವಾಗಿದೆ. ಇನ್ನುಮುಂದಾದರೂ ಈ ಕೂಡಲೇ ಸೇತುವೆ ಮತ್ತು ರಸ್ತೆ ಅಭಿವೃದ್ಧಿಪಡಿಸಿ, ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕೆಂದು ಆ ಭಾಗದ ಇಲ್ಲಿನ ವಾಹನ ಸವಾರರು ಮತ್ತು ಪ್ರಯಾಣಿಕರು ಒತ್ತಾಯಿಸಿದ್ದಾರೆ.




