ಚನ್ನಪಟ್ಟಣದಲ್ಲಿ ಅಕ್ರಮ ಗಣಿಗಾರಿಕೆ; ಮೌನವಾದ ಆಡಳಿತ

ವರದಿ: ರಾಜೇಶ್ ಕೊಂಡಾಪುರ
ರಾಮನಗರ: ಚನ್ನಪಟ್ಟಣ ತಾಲೂಕಿನ ಗಡಿಗ್ರಾಮದ ಮಾದೇಗೌಡನ ದೊಡ್ಡಿ ಗ್ರಾಮದ ಸಮೀಪ ಇರುವ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಈಬಗ್ಗೆ ಮಾಹಿತಿ ಇದ್ದಾಗಿಯೂ ತಾಲೂಕು ಆಡಳಿತ ಕಣ್ಣುಮುಚ್ಚಿ ಕುಳಿತಿದೆ.
ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದಾಗಿ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದಾಗಿಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಗ್ರಾಮಸ್ಥರಿಗೆ ಹಾಗೂ ಸುತ್ತಮುತ್ತಲಿನ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಅನಾನುಕೂಲವಾಗುತ್ತಿದ್ದು, ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾರೆಕೊಪ್ಪ ದಾಖ್ಲೆ ಮಾದೇಗೌಡನದೊಡ್ಡಿಯ ಸರ್ವೇನಂಬರ್ ೩೦ರ ಸರ್ಕಾರಿ ಗೋಮಾಳದಲ್ಲಿ ಮೂರುನಾಲ್ಕು ಮಂದಿ ನಿರಂತರವಾಗಿ ಕಲ್ಲು ಕಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಈ ಸ್ಥಳದಲ್ಲಿರುವ ಬೆಟ್ಟದ ಕಲ್ಲು ಬಂಡೆಗೆ ಡೈನಾಮೆಟ್ ಇರಿಸಿ ಕಲ್ಲುಗಳನ್ನು ಸಿಡಿಸಲಾಗುತ್ತಿದೆ. ಹೀಗೆ ಕಲ್ಲು ಸಿಡಿಸುವ ಸಮಯದಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ.
ಕಲ್ಲು ಸಿಡಿಸುವ ಸಮಯದಲ್ಲಿ ಉಂಟಾಗುವ ಅಪಾರ ಶಬ್ದದಿಂದಾಗಿ ಪಕ್ಕದಲ್ಲಿರುವ ಅರಣ್ಯ ಪ್ರದೇಶದ ಪ್ರಾಣಿಗಳು ಭಯಗೊಂಡು ಗ್ರಾಮದತ್ತ ನುಗ್ಗುವ ಸಾಧ್ಯತೆ ಇದೆ. ಇನ್ನು ಈ ಭಾಗದಲ್ಲಿ ಆನೆಗಳ ಹಾವಳಿ ಸಾಕಷ್ಟಿದ್ದು, ಕಲ್ಲುಗಣಿಗಾರಿಕೆಯಿಂದ ಆನೆಗಳು ಅಡ್ಡಾದಿಡ್ಡಿ ನುಗ್ಗಿ ಅವಾತಂರ ಸೃಷ್ಟಿಸುವ ಸಾಧ್ಯತೆಯೂ ಹೆಚ್ಚಿದೆ.
ಕ್ವಾರಿಸ್ಫೋಟ ಗೊಂಡಾಗ ಕಲ್ಲಿನ ತುಣುಕುಗಳು ಎಲ್ಲಾಕಡೆ ಚೆಲ್ಲಾಡುತ್ತಿವೆ. ಇದರಿಂದಾಗಿ ಅಕ್ಕಪಕ್ಕದ ಜಮೀನಿನಲ್ಲೆ ಕೆಲಸ ಮಾಡುತ್ತಿರುವವರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಗ್ರಾಮದಲ್ಲಿ ಸಹ ಕಲ್ಲು ಗಣಿಗಾರಿಕೆಯಿಂದ ಮನೆ ಬಿರುಕು ಬಿಡುವುದು ಸೇರಿದಂತೆ ಹಲವಾರು ಅವಾಂತರಗಳು ಎದುರಾಗುವ ಸಾಧ್ಯತೆ ಇದ್ದು,ಈ ಸಮಸ್ಯೆಗೆ ಪರಿಹಾರ ನೀಡಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಬ್ಲಾಸ್ಟಿಂಗ್ ಅಪಾಯ ಎಂಬ ನಿಯಮ ಇದೆ. ರಾಜ್ಯದಾದ್ಯಂತೆ ಕಲ್ಲುಗಣಿಗಾರಿಕೆಗೆ ಬಳಕೆ ಮಾಡುವ ಸ್ಫೋಟಕಗಳಿಂದಾಗಿ ಅಪಾಯ ಎದುರಾಗಿರುವ ಉದಾಹರಣೆ ಸಾಕಷ್ಟಿದೆಯಾದರೂ ಇಲ್ಲಿನ ಅಧಿಕಾರಿಗಳು ಇದಕ್ಕೆ ಅವಕಾಶ ನೀಡಿರುವುದು ಯಾಕೆ ಎಂದು ಸ್ತಳೀಯ ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಕಲ್ಲು ಗಣಿಗಾರಿಕೆಯನ್ನು ನಿಷೇದಿಸುವಂತೆ ಹಲವಾರು ಬಾರಿ ಅರ್ಜಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಅಕ್ರಮಗಣಿಕಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳ ಬೇಕು ಎಂದು ಸಿದ್ದಾಪುರ ಗ್ರಾಮದ ದಯಾನಂದ, ಲೋಕೇಶ್, ನಾಗರಾಜು, ಮಹದೇವು ಸೇರಿದಂತೆ ಹಲವಾರು ನಾಗರೀಕರು ಆಗ್ರಹಿಸಿದ್ದಾರೆ.




