ಆನೆ ದಾಳಿ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಹಳ್ಳಿ ಗ್ರಾಮದ ಸುತ್ತಮುತ್ತಲ ಆನೆ ಹಾವಳಿ ಹೆಚ್ಚಾಗಿದ್ದು, ಕೂಡಲೇ ಶಾಶ್ವತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿಲ್ಲಾ ಅರಣ್ಯ ಇಲಾಖೆ ಕಚೇರಿ ಮುಂಭಾಗ ಜಮಾಯಿಸಿದ ಗ್ರಾಮಸ್ಥರು ಕಳೆದ 9 ವರ್ಷಗಳಿಂದ ನಿರಂತರ ಆನೆ ದಾಳಿಗೆ ತುತ್ತಾಗುತ್ತಿದ್ದೇವೆ. ಇದಕ್ಕೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕೆಂದರು.
ಬಿ.ವಿ. ಹಳ್ಳಿ ಗ್ರಾಮದ ಸುತ್ತಮುತ್ತ ಆನೆ ಹಾವಳಿ ದಿನದಿಂದ ದನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಕೈಗೆ ಬಂದ ಫಸಲು ಸಂಪೂರ್ಣ ನಾಶವಾಗುತ್ತಿದೆ. ಹಿಂಡು ಹಿಂಡಾಗಿ ಆನೆಗಳು ಜಮೀನುಗಳಿಗೆ ನುಗ್ಗುತ್ತಿವೆ. ತೆಂಗು, ಬಾಳೆ, ಅಡಿಕೆ, ಮಾವು ಸೇರಿದಂತೆ ಹಾಕಿದ ಎಲ್ಲಾ ಬೆಳೆಗಳನ್ನು ನಾಶ ಮಾಡುತ್ತಿವೆ. ಕಳೆದ ಎರಡ್ಮೂರು ದಿನಗಳಲ್ಲಿ 120ಕ್ಕೂ ತೆಂಗಿನ ಮರಗಳು ನಾಶವಾಗಿವೆ ಎಂದು ರೈತರು ದೂರಿದರು.
ಇಲಾಖೆ ಅಧಿಕಾರಿಗಳು ಜವಾಬ್ದಾರಿ ಪ್ರದರ್ಶಿಸಿ, ಆನೆ ದಾಳಿ ತಡೆಗಟ್ಟುವುದರ ಜೊತೆಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದರು. ರೈತ ಕುಳ್ಳಪ್ಪ ಮಾತನಾಡಿ, ಕಳೆದ 9 ವರ್ಷಗಳಿಂದ ಆನೆ ದಾಳಿ ನಡೆಯುತ್ತಲೇ ಇದೆ. ರೈತರಿಗೆ ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ಸಾಲುತ್ತಿಲ್ಲ. 25 ತೆಂಗಿನ ನಾಶವಾಗಿರುವುದಕ್ಕೆ 6 ಸಾವಿರ ಪರಿಹಾರ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರು ಒಟ್ಟಾಗಿ ಪ್ರಶ್ನೆ ಮಾಡಿದ್ದಕ್ಕೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ ಎಂದು ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬಿ.ವಿ.ಹಳ್ಳಿ ರೈತರಾದ ಟಿ. ನಾಗೇಶ್, ಶಿವಮಲ್ಲೇಗೌಡ, ಜಯಸ್ವಾಮಿ, ಶಿವಮಲ್ಲಣ್ಣ, ಪ್ರವೀಣ್, ಶ್ರೀನಿವಾಸ್, ಚಂದ್ರು ಮುಂತಾದವರಿದ್ದರು.




