ಮಲಗಿದ್ದಲ್ಲೇ ಕೊಲೆಯಾದ ಕಾಂಗ್ರೆಸ್ ಮುಖಂಡ: ಬೆಚ್ಚಿಬಿದ್ದ ರಾಮನಗರ ಜನತೆ

ರಾಮನಗರ: ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬರನ್ನ ನಿನ್ನೆ ರಾತ್ರಿ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಊಟ ಮಾಡಿ ತೋಟದ ಮನೆಯಲ್ಲಿ ಮಲಗಿದ್ದವರನ್ನ ಮನೆಗೆ ನುಗಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ ಕಂಡು ಇಡೀ ರಾಮನಗರವೇ ಬೆಚ್ಚಿ ಬಿದ್ದಿದೆ.
ಬಿಡದಿ ತಾಲೂಕಿನ ಬಾನಂದೂರು ಗ್ರಾಮದ ನಿವಾಸಿ 60 ವರ್ಷದ ಗಂಟಪ್ಪ ಎಂಬುವವರನ್ನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಗಂಟಪ್ಪ ಭೈರವನ ದೊಡ್ಡಿ ಗ್ರಾಮದ ಸಮೀಪವಿರುವ ತೋಟದ ಮನೆಯ ಬೈಕ್ ಸರ್ವಿಸ್ ಸ್ಟೇಷನ್ನಲ್ಲಿ ಮಲಗಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಸರ್ವಿಸ್ ಸ್ಟೇಷನ್ ಒಳ ಬಂದ ದುಷ್ಕರ್ಮಿಗಳು ಮಲಗಿದ್ದ ಗಂಟಪ್ಪ ಮೇಲೆ ಏಕಾ ಏಕಿ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಗಂಟಪ್ಪ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ದುಷ್ಕರ್ಮಿಗಳು ಗಂಟಪ್ಪ ಅವರ ಹೊಟ್ಟೆ ಹಾಗೂ ತಲೆಗೆ ಡ್ರ್ಯಾಗನ್ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಗಂಟಪ್ಪ ಅವರ ಕೊಲೆ ತೋಟದ ಮನೆಯಲ್ಲಿ ನಡೆದ ಕಾರಣ ಗಂಟಪ್ಪರ ಕೂಗು ಯಾರಿಗೂ ಕೇಳಿಸಿಲ್ಲ. ಬೆಳಗ್ಗೆ ಅಕ್ಕಪಕ್ಕದವರು ಹಾಗೂ ಗ್ರಾಮಸ್ಥರಿಗೆ ವಿಷಯ ತಿಳಿದಿದ್ದು ಗಂಟಪ್ಪ ಕುಟುಂಬಸ್ಥರಿಗೆ ಸುದ್ದಿ ತಿಳಿಸಿದ್ದಾರೆ. ಗಂಟಪ್ಪ ಅವರ ಮೃತದೇಹವನ್ನ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಶೀಫ್ಟ್ ಮಾಡಲಾಗಿದೆ.
ಜಮೀನು ವಿವಾದದ ಹಿನೆಲೆಯಲ್ಲಿ ಗಂಟಪ್ಪ ಅವರ ಕೊಲೆ ನಡೆದಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇದ್ರ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರಿಂದ ಸಾಕಷ್ಟು ಮಂದಿಗೆ ಇವರ ಮೇಲೆ ದ್ವೇಷ ಇದ್ದು ಇದರಿಂದಲೇ ಅವರ ಕೊಲೆ ನಡೆದಿರಬಹುದು ಅನ್ನೋ ಮಾತು ಕೇಳಿ ಬರ್ತಿದೆ.
ಗಂಟಪ್ಪ ಕೊಲೆ ಕೇಸ್ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಸದ್ಯ ಗಂಟಪ್ಪ ಕೊಲೆಯಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು ಮನೆಯ ಹಿರಿಯ ಜೀವವನ್ನ ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.



