ಚಿಕ್ಕಮಗಳೂರುಜಿಲ್ಲಾ ಸುದ್ದಿ
ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಸರ್ಕಾರ ನೆರವಾಗಲಿ: ಜೆಡಿಎಸ್ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ವರ್ಷ ಭಾರೀ ಮಳೆಯಿಂದ ಕಾಫಿ ಬೆಳೆಗಾರರು ಹಿಂದೆಂದಿಗಿಂತಲೂ ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ತಕ್ಷಣ ನೆರವಿಗೆ ಧಾವಿಸಬೇಕು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
ಕೊಳೆರೋಗದಿಂದ ಕಾಫಿ ಹಣ್ಣುಗಳು ಉದುರುತ್ತಿವೆ. ಗಿಡಗಳಲ್ಲಿರುವ ಅಲ್ಪಸ್ವಲ್ಪ ಕಾಫಿಯನ್ನೂ ಬೆಳೆಗಾರರು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೆಳೆಗಾರರ ಸಂಕಷ್ಟವನ್ನು ಸರ್ಕಾರ, ಕಾಫಿ ಮಂಡಳಿ ಸಹಿತ ಯಾರೂ ಕೇಳುವವರೇ ಇಲ್ಲದಂತಾಗಿದೆ ಎಂದರು.
ಬ್ಯಾಂಕ್ ಗಳಲ್ಲಿ ಮಾಡಿದ ಸಾಲಕ್ಕೆ ಬಡ್ಡಿ ಹೆಚ್ಚಾಗಿ ವಸೂಲಾತಿಗೆ ವಾರಕ್ಕೊಮ್ಮೆ ಬೆಳೆಗಾರರ ಮನೆಗಳಿಗೆ ನೊಟೀಸ್ ಬರತೊಡಗಿದೆ. ಕೇಂದ್ರ ಸರ್ಕಾರ ಬೆಳೆಗಾರರ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಗಳ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸಬ್ಸಿಡಿ ರೂಪದಲ್ಲಿ ಸಾಲ ನೀಡುವುದರ ಮೂಲಕ ವಿಶೇಷ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.




