ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ರಾಮನಗರದಲ್ಲಿ ಪ್ರತಿಭಟನೆ

ರಾಮನಗರ : ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಜಿಲ್ಲಾ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟಿಸಿದ ಪದಾಧಿಕಾರಿಗಳು, ಅಳ್ಳಿಮಾರನಹಳ್ಳಿ ಗ್ರಾಮದ ನಿರಾಶ್ರಿತ ದಲಿತ ಕುಟುಂಬ ಗಳಿಗೆ ಹಕ್ಕು ಪತ್ರ ನೀಡುವುದು ಸೇರಿದಂತೆ ಹಲವು ಹಕ್ಕೋತ್ತಾಯಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಗಳ ಸಹಾಯಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಾದ್ಯಂತ ನಾಲ್ಕು ತಾಲೂಕುಗಳಲ್ಲಿ ಕೆಲವು ಕಡೆ ಕಟಿಂಗ್ ಶಾಪ್, ಹೋಟೆಲ್ ಹಾಗೂ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಆದೇಶಿಸಬೇಕೆಂದು ಆಗ್ರಹಿಸಿದರು.
ಕನಕಪುರ ತಾಲೂಕು ಅಳ್ಳಿಮಾರನಹಳ್ಳಿ ಗ್ರಾಮದ ಸರ್ವೆನಂಬರ್ 40ರಲ್ಲಿರುವ ಸರ್ಕಾರಿ ಗೋಮಾಳದ ಪೈಕಿ 5 ಎಕರೆ 20 ಗುಂಟೆ ಜಮೀನನ್ನು 2014ರಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ಹಂಚಿಕೆ ಮಾಡುವ ಸಲುವಾಗಿ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಇದರಲ್ಲಿ ಮೂರುವರೆ ಎಕರೆ ಜಮೀನನ್ನು ಅಧಿಕಾರಿಗಳು ತಮಗೆ ಬೇಕಾದವರಿಗೆ ನೀಡಿದ್ದಾರೆ. ಉಳಿದ ಸುಮಾರು ಎರಡು ಎಕರೆಯಷ್ಟು ಆಶ್ರಯ ಯೋಜನೆಯ ಗೋಮಾಳದ ಜಮೀನಿನಲ್ಲಿ 30ಕ್ಕೂ ಹೆಚ್ಚು ದಲಿತ ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಈಗ ಜಿಪಂ – ತಾಪಂ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತಮಗೆ ಬೇಕಾದವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಸಲುವಾಗಿ ದಲಿತರ ಗುಡಿಸಲುಗಳನ್ನು ಏಕಾಏಕಿ ತೆರವುಗೊಳಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದರು.
ದಲಿತರ ಗುಡಿಸಲುಗಳನ್ನು ಅಕ್ರಮವಾಗಿ ಧ್ವಂಸಗೊಳಿಸಿದ ತಹಸೀಲ್ದಾರ್ ವಿಶ್ವನಾಥ್, ತಾಪಂ ಇಒ ಮಧು, ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಹನುಮಪ್ಪ ರೇಣಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹೇಮಂತ್ ಕುಮಾರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿ ಸಬೇಕು. ಇವರೆಲ್ಲರ ವಿರುದ್ಧ ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡದ ದೌರ್ಜನ್ಯ ಕಾಯ್ದೆಯಡಿಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ದೌರ್ಜನ್ಯಕ್ಕೆ ಒಳಗಾಗಿ ಗುಡಿಸಲು ಕಳೆದುಕೊಂಡ ನಿರಾಶ್ರಿತ ದಲಿತ ಕುಟುಂಬಗಳಿಗೆ ಸರ್ವೆ ನಂಬರ್ 40ರಲ್ಲಿ ಉಳಿಕೆ ಇರುವ 2 ಎಕರೆ ಜಮೀನನ್ನು ಮೀಸಲಿಟ್ಟು ಆಶ್ರಯ ಯೋಜನೆಯಡಿ ಹಕ್ಕುಪತ್ರ ನೀಡುವುದು ಹಾಗೂ ಮೂಲಭೂತ ಸೌಕರ್ಯ ಒದಗಿಸುವುದು. ದೌರ್ಜನಕ್ಕೆ ಒಳಗಾದ ಕುಟುಂಬಗ ಳಿಗೆ ಜಿಲ್ಲಾಡಳಿತವೇ ನಷ್ಟ ಭರಿಸಬೇಕು. ಈ ಅಳ್ಳಿಮಾರನಹಳ್ಳಿ ಸರ್ವೆ ನಂಬರ್ 14ರಲ್ಲಿರುವ ಕೊಡುಗೆ ಭೂಮಿಯಲ್ಲಿ ಸುಮಾರು 40 ದಲಿತ ಕುಟುಂಬಗಳು ಮತ್ತು ಸವರ್ಣಿಯರ 40 ಕುಟುಂಬಗಳು ಸುಮಾರು 2-3 ತಲೆಮಾರಿನಿಂದ ವಾಸವಾಗಿದ್ದು, ಎಲ್ಲರಿಗೂ ಹಕ್ಕುಪತ್ರಗಳನ್ನು ವಿತರಿಸಿ ಮೂಲಭೂತ ಸೌಕರ್ಯ ಒದಗಿಸಬೇಕು. ಒತ್ತುವರಿ ಯಾಗಿರುವ ದಲಿತರ 2 ಎಕರೆ ಜಮೀನಿನ ಹದ್ದು ಬಸ್ತು ಗುರುತಿಸುವಂತೆ ಆಗ್ರಹಿಸಿದರು.
ಮರಳವಾಡಿ ಹೋಬಳಿ ಬೆಳ್ಳಿಪುರ ಗ್ರಾಮದ 16 ದಲಿತ ಕುಟುಂಬಗಳಿಗೆ ಆನೆಹೊಸಳ್ಳಿ ಗ್ರಾಮದ ಸರ್ವೆ ನಂಬರ್ 41ರಲ್ಲಿ 1983-84ರಲ್ಲಿ ತಲಾ 3 ಎಕರೆ ಭೂಮಿ ಮಂಜೂರಾಗಿದ್ದು, ಈ ಜಮೀನುಗಳ ಪೋಡಿ ದುರಸ್ಥಿಗೆ ಅರ್ಜಿ ಸಲ್ಲಿಸಲಾಗಿದೆ. ಕೂಡಲೇ ಕ್ರಮವಹಿಸುವುದು, ಉಯ್ಯಂಬಳ್ಳಿ ಹೋಬಳಿ ಮಾಹಳ್ಳಿ ಗ್ರಾಮದ ಸರ್ವೆ ನಂಬರ್ 6ರಲ್ಲಿರುವ ತೋಟಿ ಇನಾಮತಿ ಜಮೀನು 3 ಎಕರೆ15 ಗುಂಟೆ ಮತ್ತು ಒತ್ತುವರಿ ಸೇರಿರುವ ಜಮೀನನ್ನು ಕಾನೂನು ಬಾಹಿರವಾಗಿ ಕಂದಾಯ ಅಧಿಕಾರಿಗಳು ನಕಲಿ ಸೃಷ್ಟಿಸಿದ್ದಾರೆ. ಬಲಾಢ್ಯರು ಮತ್ತು ಪೊಲೀಸರ ಸಹಾಯದಿಂದ ದಲಿತರ ಮೇಲೆ ದೌರ್ಜನ್ಯವೆಸಗಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಭೂಮಿಯನ್ನು ಮೂಲ ದಲಿತರಿಗೆ ವಾಪಸ್ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.
ತಾಮಸಂದ್ರ ಗ್ರಾಮದ ಸರ್ವೆ ನಂಬರ್ 253ರ ಪಟಾ ಭೂಮಿ ಮತ್ತು ಸರ್ವೆ ನಂಬರ್ 84ರಲ್ಲಿರುವ ಪರಿಶಿಷ್ಟ ಸಮುದಾಯದವರ ಭೂಮಿಯಲ್ಲಿ ನಡೆ ಯುತ್ತಿರುವ ಅಕ್ರಮ ಗಣಿಗಾರಿಕೆಗೆ ನೀಡಿರುವ ಎನ್ ಒಸಿಯನ್ನು ತಕ್ಷಣವೇ ರದ್ದುಪಡಿಸುವುದು. ಕನಕಪುರ ಟೌನ್ ಅಂಬೇಡ್ಕರ್ ನಗರ ಗೋಮಾಳ ಸರ್ವೆ ನಂಬರ್ 109ರಲ್ಲಿ 20 ಗುಂಟೆ, ಸಂತೆಕೋಡಿಹಳ್ಳಿ ಹೋಬಳಿ ಕೊಳಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 53ರಲ್ಲಿ 3 ಎಕರೆ ದಲಿತರ ಸ್ಮಶಾನಕ್ಕೆ ಮಂಜೂ ರಾಗಿದ್ದು, ಒತ್ತುವರಿಯಾಗಿರುವ ಭೂಮಿ ಹದ್ದುಬಸ್ತು ಗುರುತಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.




