ಮೂಡಿಗೆರೆ: ತಾಲೂಕು ಕಚೇರಿಯೊಳಗೆ ದೇಗುಲ ನಿರ್ಮಾಣಕ್ಕೆ ವಿರೋಧ

ಚಿಕ್ಕಮಗಳೂರು: ಮೂಡಿಗೆರೆಯ ತಾಲ್ಲೂಕು ಕಚೇರಿ ಒಳಾಂಗಣದಲ್ಲಿ ದೇಗುಲವೊಂದು ನಿರ್ಮಾಣ ಆಗುತ್ತಿರುವುದಕ್ಕೆ ವಿವಿಧ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಿನಿವಿಧಾನಸೌಧ ಹೆಸರಿನ ತಾಲೂಕು ಕಚೇರಿ ಕಟ್ಟಡದ ನಡುವೆ ಖಾಲಿ ಸ್ಥಳದಲ್ಲಿ ಆಂಜನೇಯ ಸ್ವಾಮಿದೇಗುಲ ನಿರ್ಮಾಣವಾಗುತ್ತಿದೆ. ಸರ್ಕಾರಿ ಕಚೇರಿ ಒಳಗೆ ಒಂದು ಧರ್ಮಕ್ಕೆಸೀಮಿತವಾದ ಗುಡಿ ಕಟ್ಟುವುದು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾದ ನಿಲುವಾಗಿದ್ದು, ತಾಲೂಕು ಆಡಳಿತ ಕೂಡಲೇ ಈ ದೇಗುಲ ನಿರ್ಮಾಣ ಯೋಜನೆಯನ್ನು ಕೈಬಿಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂಎಸ್ ಅನಂತ್ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಹೊಸಕೆರೆ ರಮೇಶ್ ಆಗ್ರಹಿಸಿದ್ದಾರೆ.
ತಾಲೂಕು ಕಚೇರಿ ಯಾವುದೇ ಧರ್ಮಕ್ಕೆ ಸೀಮಿತವಾದ ಆಸ್ತಿಯಲ್ಲ. ಅದರ ಮೇಲೆ ಎಲ್ಲ ಧರ್ಮದವರ ಹಕ್ಕಿದೆ. ಸರ್ಕಾರಿ ಕಟ್ಟಡಗಳು ಸಾರ್ವಜನಿಕ ಸೇವೆ ನೀಡುವ ಕೇಂದ್ರಗಳಾಗಿವೆ. ಇಂತಹ ಕಟ್ಟಡಗಳ ಆವರಣದಲ್ಲಿ ದೇಗುಲ ನಿರ್ಮಾಣದಂತಹ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದು ಅಪಾಯಕಾರಿ ಬೆಳವಣಿಗೆ. ಮುಂದೆ ಇದೇ ಕಟ್ಟಡದ ಆವರಣದಲ್ಲಿ ಮಸೀದಿ, ಚರ್ಚು ನಿರ್ಮಿಸಲೆಂದು ಸಾರ್ವಜನಿಕರು ಬೇಡಿಕೆ ಇಟ್ಟಲ್ಲಿ ತಾಲೂಕು ಆಡಳಿತ ಇದನ್ನು ಈಡೇರಿಸಲು ಸಾಧ್ಯವೇ? ಎಂದು ಪ್ರಶ್ನಿಸಿರುವ ಇವರು ದೇಗುಲದ ಬದಲಿಗೆ ಸಮಾಜಕ್ಕೆ ಬೆಳಕು ತೋರಿರುವ ಸಮಾಜ ಸುಧಾರಕರ ಮೂರ್ತಿ ನಿರ್ಮಿಸಲಿ ಎಂದು ಒತ್ತಾಯಿಸಿದ್ದಾರೆ.





