ದೇಶವನ್ನು ಆಳುತ್ತಿರುವವರಲ್ಲಿ ಈಗ ಶೇ. 72 ರಷ್ಟು ಕ್ರಿಮಿನಲ್ಗಳಿದ್ದಾರೆ: ಕಾದಂಬರಿಕಾರ ಕುಂ.ವೀರಭದ್ರಪ್ಪ

ಧಾರವಾಡ: ನಾಳೆ ರೈತ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಭಾರತ ಬಂದ್ಗೆ ಕರೆ ನೀಡಿವೆ. ಆದರೆ ಇಲ್ಲಿ ಯಾರು ರೈತರ ಮಾತು ಕೇಳಿಸಿಕೊಳ್ಳುತ್ತಿಲ್ಲ. ಪ್ರಸ್ತುತ ಆಳ್ವಿಕೆ ಮಾಡುತ್ತಿರುವ ದೇಶದ ಸರ್ಕಾರಗಳಲ್ಲಿ ಶೇಕಡಾವಾರು 72 ರಷ್ಟು ಕ್ರಿಮಿನಲ್ಗಳು ಇದ್ದಾರೆ. ಚುನಾಯಿತ ಪ್ರತಿನಿಧಿಗಳಾಗಿದ್ದಾರೆ ಎಂದು ಕಾಂದಂಬರಿಕಾರ ಸರ್ಕಾರಗಳ ವಿರುದ್ದ ಕುಂ.ವೀರಭದ್ರಪ್ಪ ವಾಗ್ದಾಳಿ ನಡೆಸಿದರು.
ಧಾರವಾಡ ಆಲೂರ ವೇಂಕಟರಾವ್ ಸಭಾಭವನದಲ್ಲಿ, ಡಾ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರೈತರ, ಕಾರ್ಮಿಕರ ಹಾಗೂ ಶಿಕ್ಷಕರ ಮಾತುಗಳನ್ನು ಈಗಿರುವ ಸರ್ಕಾರಗಳು ಕೇಳಿಸಿಕೊಳ್ಳುತ್ತಿಲ್ಲ. ಹಾಗಾಗಿ ಈಗ ರೈತರು ಕಾರ್ಮಿಕ ಸಂಘಟನೆ ಸರ್ಕಾರಗಳ ನಿರ್ಧಾರದಿಂದ ಬೇಸತ್ತು ಬಂದಗೆ ಕರೆ ನೀಡಿವೆ ಎನ್ನುವ ಮೂಲಕ ಪರೋಕ್ಷವಾಗಿ ರೈತ ಹಾಗೂ ಕಾರ್ಮಿಕ ಸಂಘಟನೆಯ ಭಾರತ ಬಂದ್ಗೆ ಬೆಂಬಲ ನೀಡಿದ್ದರು.
ಈಗ ದೇವಶವನ್ನು ಆಳುತ್ತಿರುವವರಲ್ಲಿ ಬಹುತೇಕರು ಕೋಟ್ಯಾಧೀಶರೆ ಆಗಿದ್ದಾರೆ. ಸದ್ಯ ದೇಶದಲ್ಲಿ ಆಳ್ವಿಕೆ ನಡೆಸುತ್ತಿರುವವರಿಂದ ಬಡವರ ಆಕ್ರಂದನ, ನೋವು, ನಲಿವಿಗೆ ಪರಿಹಾರ ಸಿಗುವುದು ಅನುಮಾನವಾಗಿದೆ. ಹಾಗಾಗಿ ಲೇಖಕರಾದವರು ಏನಾದರೂ ಮಾಡಬೇಕು, ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಬಾರದು, ಬೀದಿಗೆ ಇಳಿದು ಕೆಲಸ ಮಾಡಬೇಕಾಗಿದೆ. 1973-78ರ ನಡುವೆ ನಡೆದ ಚಳವಳಿಗೆ ಮರುಹುಟ್ಟನ್ನು ಈಗ ಲೇಖಕರೆಲ್ಲರೂ ಸೇರಿ ನೀಡುವ ಕೆಲಸ ಮಾಡಬೇಕಿದೆ. ಚಳಿವಳಿಗಳ ರೂವಾರಿ ಎಂದೇ ಕರೆಯಿಸಿಕೊಳ್ಳುವ ಚಂಪಾರವರ ಚಳುವಳಿಗಳ ರೂಪವೇ ಈಗ ಮಲಗಿದಂತೆ ಆಗಿದೆ. ನಾವೆಲ್ಲ ಲೇಖಕರು ಈಗ ಎಚ್ಚೆತ್ತುಕೊಳ್ಳಬೇಕು ಎನ್ನುವ ಮೂಲಕ ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿ ಮತ್ತೊಂದು ಚಳವಳಿಗೆ ನಾವೆಲ್ಲರು ಸಿದ್ಧರಾಗಬೇಕು ಎಂದು ಕರೆ ನೀಡಿದರು.




