ಈಶ್ವರಪ್ಪಗೆ ಸಂಸ್ಕಾರವಿಲ್ಲ, ಸಂಸ್ಕೃತಿಯೂ ಗೊತ್ತಿಲ್ಲ: ಸಿದ್ದರಾಮಯ್ಯ

ಮೈಸೂರು: ಈಶ್ವರಪ್ಪಗೆ ಸಂಸ್ಕಾರವೂ ಇಲ್ಲ, ಸಂಸ್ಕೃತಿಯೂ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಕೆ.ಎಸ್ ಈಶ್ವರಪ್ಪ ಅವಾಚ್ಯ ಶಬ್ದ ಬಳಸಿದ್ದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಸಂಸ್ಕಾರ ಇರುವವರು ಅಂತಹ ಪದವನ್ನು ಬಳಸುವುದಿಲ್ಲ. ಈಶ್ವರಪ್ಪ ಬೆಳೆದುಬಂದಿರುವ ರೀತಿಯೇ ಹಾಗಿದೆ. ಅವರಿಂದ ಬದಲಾವಣೆಗಳನ್ನು ನಿರೀಕ್ಷೆ ಮಾಡಲೇಬಾರದು. ಆಡಳಿತದಲ್ಲಿರುವವರು ಟೀಕೆಗಳನ್ನು ಆರೋಗ್ಯ ಪೂರ್ಣವಾಗಿ ಸ್ವೀಕರಿಸಬೇಕು. ರಾಜಕಾರಣದಲ್ಲಿ ಟೀಕೆ ಬರುವುದು ಸಹಜ. ಅದಕ್ಕೆ ಈ ರೀತಿ ಪ್ರತಿಕ್ರಿಯೆ ಸರಿಯಲ್ಲ. ಈಶ್ವರಪ್ಪ ಮೊದಲಿನಿಂದಲೂ ಹೀಗೆಯೇ ಮಾತ್ನಾಡುತ್ತಿದ್ದಾರೆ. ಅವರಿಗೆ ಆರೋಗ್ಯಕರವಾದ ಸಂಸ್ಕೃತಿಯೇ ಇಲ್ಲ. ಬಿಜೆಪಿಯವರ ಸಂಸ್ಕೃತಿಯೇ ಇಂಥದ್ದು. ಈಶ್ವರಪ್ಪರಿಗೆ ಬಿಜೆಪಿ ಬುದ್ದಿ ಹೇಳುವ ಕೆಲಸ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ಸಿದ್ದರಾಮಯ್ಯ ಇಲಿ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಇಲಿಯಾ, ಹುಲಿಯಾ, ಮನ್ನುಷ್ಯನಾ ಎಂದು ತೀರ್ಮಾನ ಮಾಡಬೇಕಾದವರು ಜನ. ಇದಕ್ಕೆ ಈಶ್ವರಪ್ಪನ ಸರ್ಟಿಫಿಕೇಟ್ ಬೇಕಾ? ಜನರು ಉತ್ತರ ಕೊಡ್ತಾರೆ, ಈಶ್ವರಪ್ಪ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದರು.




