ಯುವಕನ ಮೆದುಳು ನಿಷ್ಕ್ರಿಯ: ನಾಲ್ವರಿಗೆ ಅಂಗಾಗ ದಾನ ಮಾಡಿ ಸಾರ್ಥಕತೆ ಮೆರದ ಕುಟುಂಬಸ್ಥರು

ಮೈಸೂರು : ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಗ ದಾನ ಮಾಡುವ ಮೂಲಕ ಪೋಷಕರು ಕಷ್ಟದ ಸಮಯದಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತೆಂಗಿನಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು ಕುಟುಂಬಸ್ಥರು ಪುತ್ರನ ಅಂಗಾಗಗಳನ್ನು ದಾನ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ತೂಬಿನಕೆರೆಯ ಹನುಮಂತು ಹಾಗೂ ಪೂರ್ಣಿಮಾ ದಂಪತಿಯ ಪುತ್ರ ಹೇಮಂತ್ ಕುಮಾರ್ (27) ಕಳೆದ ಗುರುವಾರ ತೆಂಗಿನ ಮರದಲ್ಲಿ ಕಾಯಿ ಕೀಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದರು.
ತಕ್ಷಣ ಇವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷೆ ಮಾಡಿದಾಗ ಇವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದರು.
ಇಂತಹ ಕಷ್ಟದ ಸಮಯದಲ್ಲೂ ಹೇಮಂತ್ ಕುಮಾರ್ ತಂದೆ – ತಾಯಿ ಇವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದು, ಅದರಂತೆ ಎರಡು ಕಿಡ್ನಿ, ಒಂದು ಲಿವರ್, ಹೃದಯ ಕವಾಟ ದಾನ ಮಾಡಿ ನಾಲ್ವರು ರೋಗಿಗಳ ಜೀವ ಉಳಿಸಿದ್ದಾರೆ. ನಾಲ್ವರ ಬದುಕಿಗೆ ಬೆಳಕಾಗಿ, ಸಾರ್ಥಕತೆ ಮೆರೆದಿದ್ದಾರೆ




