ಮೈಸೂರಿನಲ್ಲಿ ಕೆಲ ಪ್ರಭಾವಿಗಳ ಅಕ್ರಮ ಪ್ರಕರಣ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ

ಮೈಸೂರು: ಮೈಸೂರು ನಗರದ ಸುತ್ತಮುತ್ತಲಿನ ಪ್ರಭಾವಿಗಳ ಭೂ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಇಂದು ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜಾಗ ವೀಕ್ಷಿಸಿ ಪರಿಶೀಲನೆ ನಡೆಸಿದರು.
ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಆರ್.ಟಿ.ಐ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ, ಬರೆದ ಪತ್ರದ ಮೇರೆಗೆ ಭೂ ಅಕ್ರಮ ಪ್ರಕರಣದ ತನಿಖೆ ನಡೆಸುವಂತೆ ಹಾಲಿ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅವರಿಗೆ ಕಳೆದ ಸೆಪ್ಟೆಂಬರ್ ನಲ್ಲಿ ಆದೇಶಿಸಲಾಗಿತ್ತು. ಆದರೆ ಕಳೆದ ಅಕ್ಟೋಬರ್ ನಲ್ಲಿ ನಾಲ್ಕು ತಿಂಗಳು ಕಾಲಾವಕಾಶ ಕೇಳಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸರಕಾರಕ್ಕೆ ಪತ್ರ ಬರೆದಿದ್ದರು. ಭೂ ಒತ್ತುವರಿ ಸಂಬಂಧ ಸಮಗ್ರ ತನಿಖೆ ನಡೆಯಬೇಕಿದೆ.
ಸಂಬಂಧಪಟ್ಟವರಿಗೆ ತಿಳಿವಳಿಕೆ ನೋಟಿಸ್ ನೀಡಬೇಕು. ಜಂಟಿ ಸರ್ವೇ ಮೂಲಕ ಭೂಮಿ ಅಳತೆ ಮಾಡಬೇಕು. ಪ್ರತಿ ಹಂತದಲ್ಲೂ ಕಂದಾಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಭೂ ಮಾಪನ ಇಲಾಖೆ ಸಮನ್ವಯ ಅಗತ್ಯ. ಆದರೆ ಈಗ ದಸರಾ ಹಾಗೂ ಕೋವಿಡ್ ತುರ್ತು ಕಾರ್ಯಗಳು ಇರುವುದರಿಂದ ಕಾಲಮಿತಿ ವಿಸ್ತರಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಡಿಸಿ ಮನವಿ ಮಾಡಿದ್ದರು. ಈಗ ಜಿಲ್ಲಾಧಿಕಾರಿ ಕೇಳಿದ್ದ ಕಾಲಾವಕಾಶ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ತಂಡದ ಜತೆ ಮೈಸೂರು ತಾಲೂಕಿನ ಕೇರ್ಗಳ್ಳಿ, ದಟ್ಟಗಳ್ಳಿ, ಯಡಹಳ್ಳಿ, ಲಿಂಗಾಂಬುದಿಪಾಳ್ಯದಲ್ಲಿ ನಡೆದಿದೆ ಎನ್ನಲಾದ ಭೂ ಅಕ್ರಮಗಳ ಪರಿಶೀಲನೆ ನಡೆಸಿದರು.




